Saturday 18 June 2016

ಬಾಜೀರಾಯನ ಬುಂದೇಲಖಂಡ್ ದಂಡಯಾತ್ರೆ




             ಝಾನ್ಸಿಯ ಆಗ್ನೇಯ ಮತ್ತು ಯಮುನೆಯ ದಕ್ಷಿಣಕ್ಕೆ ಬರುವ ಪ್ರದೇಶವೇ ಬುಂದೇಲಖಂಡ್ . ಶತಮಾನಗಳಿಂದ ಬುಂದೇಲ್ ಎಂಬ ಸ್ವಾಭಿಮಾನಿ ಮತ್ತು ದೇಶಭಕ್ತ ರಾಜಪೂತರಿಗೆ ಪ್ರಸಿದ್ಧಿಯಾಗಿದ್ದ ಜನ . ಫಲವತ್ತಾದ ಭೂಮಿಯಲ್ಲದೆ ಪನ್ನಾ ಎಂಬ ಭಾರತದ ಏಕೈಕ ವಜ್ರದ ಗಣಿಗೆ ಪ್ರಸಿದ್ಧಿ .


          ಆದರೆ ಮೊಘಲ್ ಸಾಮ್ರಾಜ್ಯ ವಿಸ್ತಾರಗೊಳ್ಳುತ್ತಾ ಈ ಪ್ರದೇಶವೂ ಅವರ ತಕ್ಕೆಗೆ ಸೇರಬೇಕಾಯಿತು . ಸ್ಥಳೀಯ ರಾಜರೆಲ್ಲಾ ಮೊಘಲರ ಹಿಡಿತಕ್ಕೆ ಸಿಲುಕಿ ಅವರ ಕೈಯ್ಯಾಳಗಬೇಕಾಯಿತು . ಔರಂಗಾಜೆಬನು ತನ್ನ ತಂದೆಯ ವಿರುದ್ಧ ತಿರುಗಿಬಿದ್ದಾಗ ಚಂಪತರಾಯ ಬುಂದೇಲ ಔರಂಗಾಜೆಬನಿಗೆ ಬಲವಾಗಿ ನಿಂತಿದ್ದ . ಇದರಿಂದ ಚಂಪತರಾಯನಿಗೆ ಹತ್ತು ಸಾವಿರ ಸೇನೆಯ ಮನ್ಸೂಬ್ದಾರಿ ಪಟ್ಟ ಕೊಟ್ಟಿದ್ದ . ಆದರೆ ಅದನಂತರ ಔರಂಗಾಜೆಬನೇ ಇವರ ವಿರುದ್ಧ ಸೇನೆ ಕಳಿಸಿದ್ದ . ಆ ಯುದ್ಧದಲ್ಲಿ ಚಂಪತರಾಯ ಸಾವನ್ನಪ್ಪಿದ್ದ . ಚಂಪತರಾಯನ ಐದು ಜನ ಗಂಡು ಮಕ್ಕಳಲ್ಲಿ ಹನ್ನೊಂದು ವರ್ಷದ ಎರಡನೆಯವನೇ ಛತ್ರಸಾಲ್ . ಅವನೂ ಸಹಿತ ಮೀರ್ಜಾ ರಾಜ ಜಯಸಿಂಹನ ಜೊತೆ ಶಿವಾಜಿ ಮಹಾರಾಜರ ವಿರುದ್ಧ ಯುದ್ಧಕ್ಕೆ ಹೋಗಬೇಕಾಗಿತ್ತು . ಆ ಸೇನೆಯ ದಿಲೇರ್ ಖಾನನ ಕೈ ಕೆಳಗೆ ದಿಯೋಗಢ ಕೋಟೆಯನ್ನು ವಶಪಡಿಸಿಕೊಳ್ಳಲು ಹೋರಾಡಿದ್ದ .

ಆದರೆ ರಕ್ತಗತವಾಗಿ ಅವನಲ್ಲಿದ್ದ ಸ್ವಾಭಿಮಾನ ಮತ್ತು ದೇಶಭಕ್ತಿ ಅಲ್ಲಿ ಅವನನ್ನು ಹೆಚ್ಚು ಕಾಲ ಇರುವಂತೆ ಮಾಡಲಿಲ್ಲ . ದಿಲೇರ ಖಾನನ ಡೇರೆಯನ್ನು ತೊರೆದು ನೇರ ಶಿವಾಜಿ ಮಹಾರಾಜರ ಬಳಿ ಹೋಗಿ ಸೇವಾ ಭಿಕ್ಷೆಯನ್ನು ಬೇಡಿದ . ಆದರೆ ಶಿವಾಜಿ ಮಹಾರಾಜರು ಅವನಿಗೆ ತನ್ನ ತಂದೆಯ ಸಾಮ್ರಾಜ್ಯವನ್ನು ಹೋರಾಡಿ ಮರಳಿ ಪಡೆಯೆಂದು ಸಲಹೆಯನ್ನಿತ್ತರು. ಅಂದಿನಿಂದ ಛತ್ರಸಾಲ್ ತನ್ನ ತಾಯ್ನಾಡಿನಲ್ಲೇ ಮೋಘಲರನ್ನು ಸೆಣಸಿ ಪನ್ನಾವನ್ನು ರಾಜಧಾನಿಯನ್ನಾಗಿಸಿ ಒಂದು ಸಣ್ಣ ಸಾಮ್ರಾಜ್ಯ ಕಟ್ಟಿದ . ಅರವತ್ತು ವರ್ಷಗಳ ಕಾಲ ರಾಜ್ಯಭಾರವನ್ನೂ ಸಹಿತ ಮಾಡಿದ್ದ .

ಇದರ ಮಧ್ಯೆ ತನ್ನ ಎಂಭತ್ತನೆಯ ಇಳಿವಯಸ್ಸಿನಲ್ಲಿ ( ಅಂದರೆ 1728 ಡಿಸೆಂಬರ್ ) ಮೊಘಲ್ ಸರದಾರ ಮಹಮ್ಮದ್ ಖಾನ್ ಬಂಗೇಶ್ ಪುನಃ ಬುಂದೇಲಖಂಡನ್ನು ಕಬಳಿಸಲು ತನ್ನ ಸೇನೆಯನ್ನು ನುಗ್ಗಿಸಿದ್ದ . ಯುದ್ಧದಲ್ಲಿ ಗಾಯಗೊಂಡ ವೃದ್ಧ ಯೋಧ ಛತ್ರಸಾಲ್ ಜಯತ್ಪುರ್ ಎಂಬ ಕೋಟೆಯಲ್ಲಿ ಆಶ್ರಯಿಸಿದ್ದ . ಬಂಗೇಶನು ಅವನನ್ನು ಗೃಹಬಂಧನದಲ್ಲಿಟ್ಟು ತನ್ನ ಕಣ್ಣಿಟ್ಟಿದ್ದ .
ಅದೇ ಸಮಯದಲ್ಲಿ (ಅಂದರೆ ಜನವರಿ 1729) ಬಾಜೀರಾಯನ ತಮ್ಮ ಮಧ್ಯಪ್ರದೇಶದ ಮಾಳವಾ ಪ್ರಾಂತವನ್ನು ಆಕ್ರಮಿಸುತ್ತಾ ಉಜ್ಜಯಿನಿಯನ್ನು ಮುತ್ತಿಗೆ ಹಾಕಿದ್ದ . ಅದರ ಜೊತೆಗೆಯೇ ಬಾಜೀರಾಯ ಬುಂದೇಲಖಂಡವನ್ನು ಆಕ್ರಮಿಸಲಿ ನಿರ್ಧರಿಸಿದ . ಷಾಹು ಮಹಾರಾಜರಿಗೋ ತನ್ನ ಮುಖ್ಯ ಸೇನೆ ಉತ್ತರುತ್ತರ ದಾಟುತ್ತಾ ದೂರ ಸರಿದ ಇತ್ತ ದಕ್ಷಿಣದಲ್ಲಿ ನವಾಬ ತರಲೆ ತೆಗೆಯುತ್ತಾನೇನೋ ಎಂಬ ಭಯವೂ ಇತ್ತು . ಅದೃಷ್ಟವಶಾತ್ ಹಾಗೇನೂ ಆಗಲಿಲ್ಲ .


        ಬುಂದೇಲಖಂಡವನ್ನು ತಲುಪಲು ಎರಡು ಮುಖ್ಯ ದಾರಿಗಳು . ಒಂದು ಉಜ್ಜಯಿನಿ , ಸಿರೋಂಜ್ ಮತ್ತು ಬಿಲ್ಸಾ ಮಾರ್ಗವಾಗಿ . ಆದರೆ ಉಜ್ಜಯಿನಿಯ ಸಮರ ವಾತಾವರಣದಿಂದಾಗಿ ಆ ಮಾರ್ಗ ಸೂಕ್ತವಲ್ಲವೆಂದು ಗಧ ಮಂಡ್ಲ ಮಾರ್ಗವಾಗಿ ಹೋಗುವುದೆಂದು ಗೊತ್ತು ಮಾಡಿದ . ಹಾಗೆಯೇ ಮೊದಲ ಮಾರ್ಗವಾಗಿ ಬರುವುದಾದರೆ ಖಾನಾನಿಗೆ ಚೀಮಾಜಿಯ ಚಲನೆ ಅರಿವಿತ್ತು . ಆದರೆ ಬಾಜೀರಾಯ ಮತ್ತೊಂದು ಹಾದಿಯಲ್ಲಿ ಬರುವನೆಂದು ಗೊತ್ತಿರಲಿಲ್ಲ .


     ಬಾಜೀರಾಯ ಬರುವನೆಂದು ತಿಳಿದ ಛತ್ರಸಾಲ ತನ್ನ ನಂಬಿಕಸ್ತ ಸಿಪಾಯಿ ದುರ್ಗಾದಾಸನನ್ನು ಸಹಾಯಕ್ಕಾಗಿ ಕಳುಹಿಸಿದ . ಮಾರ್ಚ್ 12 ರಂದು  ಛತ್ರಸಾಲನ ಮಗ ಭಾರತಿ ಸಿಂಗ್ ಬಾಜೀರಾಯನನ್ನು ಭೇಟಿ ಮಾಡಿ ಒಟ್ಟಿಗೆ ರಣತಂತ್ರ ಹೂಡಿದರು . ಅವರಿಬ್ಬರ ಸೇನೆ ಒಟ್ಟಿಗೆ ಎಪ್ಪತ್ತು ಸಾವಿರ ಇತ್ತೆಂದು ಅಂದಾಜು . ಬಾಜೀರಾಯನು ಹೇಗೆ ನಿಜಾಮನನ್ನು ಸುತ್ತುವರೆದು ಅನ್ನಾಹಾರ ವನ್ನು ಕಡಿತಗೊಳಿಸಿ ಕತ್ತುಹಿಸಿಕಿದನೋ ಅದೇ ತಂತ್ರಕ್ಕೆ ಮುಂದಾದ . ಬಾಜೀರಾಯ ಹಾಗೆಯೇ ಮಹಮ್ಮದ್ ಖಾನನ ಪ್ರದೇಶವನ್ನು ಮುತ್ತುವರೆದು ಉಸಿರುಕಟ್ಟಿಸಿದ . ಆಗ ಖಾನನ ಮಗ ತಂದೆಗಾಗಿ ಒಂದು ಸೇನೆ ತೆಗೆದುಕೊಂಡು ಬಂದ . ಆದರೆ ಬಾಜೀರಾಯನ ಸೇನಾಪತಿ ಪೀಲಾಜಿ ಜಾಧವ್ ಮಗನನ್ನು ತಂದೆಯ ಸನಿಹ ಬರಲು ಬಿಡಲಿಲ್ಲ . ದಾರಿ ಮಧ್ಯದಲ್ಲೇ ಅವನ ಸೇನೆಯನ್ನು ಸದೆಬಡಿದು ಪಲಾಯನ ಮಾಡುವಂತೆ ಮಾಡಿದ . ಅಷ್ಟಲ್ಲದೇ ಅವನ 3000 ಕುದುರೆಗಳು 23 ಆನೆಗಳನ್ನೂ ವಶಪಡಿಸಿಕೊಂಡ . ಖಾನಾನು ದೆಹಲಿಗೆ ನೆರವನ್ನು ಕೋರಿದನಾದರೂ ಏನೂ ಪ್ರಯೋಜನವಾಗಲಿಲ್ಲ . ಹಾಗೇ ಮುಂದುವರೆಯುತ್ತಾ ಏಪ್ರಿಲ್ ತಿಂಗಳಲ್ಲಿ ಖಾನನು ತನ್ನ 15000 ಸೇನೆ ಅನ್ನಾಹಾರವಿಲ್ಲದೆ ರವ ರವ ನರಳುತ್ತಿತ್ತು .


ಕೊನೆಗೂ ಮತ್ತೇನೂ ಗತಿಗಾಣದೆ ಮಹಮ್ಮದ್ ಖಾನ್ ಬಂಗೇಶ ಮತ್ತೆ ಬುಂದೇಲಖಂಡದ ತಂಟೆಗೆ ಬರುವುದಿಲ್ಲವೆಂದು ಬಾಜೀರಾಯನಿಗೆ ಪತ್ರ ಬರೆದು ಅಲ್ಲಿಂದ ಜಾಗ ಖಾಲಿ ಮಾಡಿದ .



ಇದರಿಂದ ಬಾಜೀರಾಯ ಒಬ್ಬ ಪಠಾಣ್ ಸುಬೇದಾರನನ್ನು ಸೋಲಿಸಿದ್ದಲ್ಲದೇ ಛತ್ರಸಾಲನಿಗೆ ಕೊಟ್ಟ ಮಾತನ್ನೂ ಪೂರೈಸಿದ . ಛತ್ರಸಾಲನೂ ಸಹಿತ ತನ್ನ ಮೂರನೇ ಒಂದು ಭಾಗದ ಪ್ರದೇಶವನ್ನು ಮರಾಠಾರಿಗೆ ಕಾಣಿಕೆಯಾಗಿ ನೀಡಿದ . ಛತ್ರಸಾಲನ  ಮರಣಾನಂತರವೂ ಅವನ ಮಕ್ಕಳು ಬಾಜೀರಾಯನಿಗೆ ಎರಡೂವರೆ ಲಕ್ಷ ಆದಾಯ ಸೇನಾವೆಚ್ಚಕ್ಕಾಗಿ ನೇಡುತ್ತಲಿದ್ದರು . ಮತ್ತೆ ಮುಂದಿನ ಸೇನಾ ಯೋಜನೆಗಳಿಗೂ ನೆರವಾದರು . ಆ ಬುಂದೇಲಖಂಡ್ ಬಾಜೀರಾಯನಿಗೆ ತನ್ನ ಉತ್ತರ ಭಾರತದ ಮುಂದಿನ ಅಭಿಯಾನಕ್ಕೆ ಭದ್ರನೆಲೆಯೂ ಆಯಿತು .

Thursday 9 June 2016

ಸಾಟಿಯಿಲ್ಲದ ಮಾರಾಠಾ ಖಡ್ಗ – ಬಾಜೀರಾಯ



ಸಧೃಢವಾದ  ಬಲಶಾಲಿ ದೇಹ , ನೀಳ ಕಾಯ , ಹೊಳೆಯುವ ಮೈಬಣ್ಣ . ಕಾಂತಿತುಂಬಿತ ಕಂಗಳಿಂದ ಕಂಗೊಳಿಸುವ ಸುಂದರ ಯುವಕ .  ಸದಾ ವ್ಯಾಯಾಮ ಕಸರತ್ತುಗಳಿಂದ ಪಳಗಿದ್ದ ಬಾಜೀರಾಯ . ಒಳ್ಳೆಯ ಕುದುರೆ ಸವಾರ . ದೂರ ದೂರದ ತನಕ ಕೊಂಚವೂ ಸುಸ್ತಾಗಾದೇ ಕುದುರೆ ಚಲಾಯಿಸಬಲ್ಲ. ಖಡ್ಗ , ಈಟಿ , ಭರ್ಜಿ , ಬಿಲ್ಲು ಬಾಣಗಳನ್ನು ಚಲಾಯಿಸುವುದರಲ್ಲಿ ನಿಪುಣ . ಸಾಯುವ ಮುನ್ನ ಒಮ್ಮೆಯೂ ಖಾಯಿಲೆ ಬಿದ್ದಿರದ ಆರೂಗ್ಯಕರ ದೇಹ . ಭಯ ಎಂಬುದು ಲವಲೇಶವೂ ಇಲ್ಲದಂಥಹ ಧೈರ್ಯಶಾಲಿ ವ್ಯಕ್ತಿ .

ಬಾಹುಬಲವಷ್ಟಲ್ಲದೆ ಅಸಾಧಾರಣ ಬುದ್ಧಿವಂತನೂ ಕೂಡ . ಬ್ರಾಹ್ಮಣ ಕುಟುಂಬದಲ್ಲೇ ಬೆಳೆದ ಬಾಜಿರಾಯ ರಾಮಾಯಣ ಮಹಾಭಾರತ ವೆಲ್ಲವನ್ನು ಕಲಿತಿದ್ದ . ತನ್ನ ಬಾಲ್ಯದ ಶಿಕ್ಷಣ ಮಾತೃಛಾಯೆಯಲ್ಲಿಯೇ ಕಟ್ಟೂನಿಟ್ಟಾಗಿ ನಡೆದಿತ್ತು . ಹೇಗೆ ಶಿವಾಜಿಯನ್ನು ಜೀಜಾಮಾತೆ , ಹೇಗೆ ಪ್ರತಾಪನನ್ನು ಜಯವಂತಾ ಭಾಯಿ ಯೋ ಹಾಗೆ ಮತ್ತೊಬ್ಬ ಮಾತೃಭೂಮಿಯ ವೀರಪುತ್ರನೂ ಮಾತೆಯ ಪದತಲದಲ್ಲೇ ಬೆಳೆದಿದ್ದ . ತಾಯಿ ರಾಧಾಭಾಯೀಯೊ ಸಹಿತ ಒಳ್ಳೆಯ ಕಲಿತ ಮಹಿಳೆಯೇ ಆಗಿದ್ದರು . ಎಷ್ಟರ ಮಟ್ಟಿಗೆಯೆಂದರೆ ಕೆಲವು ಬಾರಿ ಮಗನಿಗೆ ರಾಜ್ಯಾಡಳಿತದ ವಿಚಾರದಲ್ಲಿಯೂ ಸಲಹೆ ನೀಡುತ್ತಿದ್ದರು .
ಮಾನಸಿಕವಾಗಿ ಬಾಜಿರಾಯ ಶಿವಾಜಿಯ ಪುತ್ರನೇ . ತನ್ನ ಪೂರ್ವಕಾಲೀನ ಇತಿಹಾಸವನ್ನು ಚನ್ನಾಗಿ ಅರಿತಿದ್ದ . ಶಿವಾಜಿಯೂ ಸ್ವರಾಜ್ಯಸ್ಥಾಪನೆಗೆ ಮರಾಠಾ ಸಾಮ್ರಾಜ್ಯವನ್ನು ಸ್ಥಾಪಿಸಲು ಪಟ್ಟ ಶ್ರಮ . ತದನಂತರ ನಡೆದ ಸಾಂಭಾಜಿಯ ಸಂಗ್ರಾಮ ಮತ್ತವನ ಬರ್ಬರ ಹತ್ಯೆ ಮತ್ತು ರಾಜಾರಾಮನ ಸಂಘರ್ಷ . ತದನಂತರ ತನ್ನ ಸಮಕಾಲೀನ ವಿದ್ಯಾಮನಗಳಲ್ಲಿ ನಡೆದ ಷಾಹುವಿನ ಮೋಘಲರ ಬಂಧ ಮೋಚನೆ ಮತ್ತು ಆ ಸಮಯದಲ್ಲಿ ತಂದೆ ವಿಶ್ವನಾಥ ಭಟ್ಟರ ಜೊತೆಯಲ್ಲೇ ಅಹ್ಮದನಗರ ದೌಲತಾಬಾದ ಕಡೆಗಳಲ್ಲಿ ಏಳನೆಯ ವಯಸ್ಸಿನಲ್ಲೇ ಓಡಾಡಿದ ರಾಜಕೀಯ ಅನುಭವಗಳು. ತನ್ನ ಬಾಲ್ಯಾವಸ್ಥೆಯಲ್ಲಿಯೇ ಗೌರವಾನ್ವಿತ ತಂದೆ ಪೇಶ್ವೆಯಾಗಿ ಏರಿದ್ದನ್ನು ಕಾಣುತ್ತಾ ಅಭಿಮಾನದಿಂದ ಬೆಳೆದಿದ್ದ . ಇವೆಲ್ಲ ವಿಶಿಷ್ಟ ಸಂಸ್ಕಾರ ಮತ್ತು ಅನುಭವಗಳು ಬಾಜಿರಾಯನಲ್ಲಿನ ಮಹಾಪುರುಷ ಅತಿ ಬೇಗ ಬೆಳೆಯಲು ಸಾಧ್ಯವಾಯಿತು .

ತಂದೆ ವಿಶ್ವನಾಥ ಭಟ್ಟರಂತೂ ಭಾರತ ಕಂಡ ಅನರ್ಘ್ಯ ರತ್ನಗಳಲ್ಲೊಬ್ಬರು . ಮರಾಠಾ ಸಂಸ್ಥಾನಕ್ಕೆ ಶಾಸನ ಅರ್ಥವ್ಯವಸ್ಥೆ ರೀತಿ ರಿವಾಜುಗಳ ಅಡಿಪಾಯ ಹಾಕಿಕೊಟ್ಟವರೇ ಇವರು . ಹಣಕಾಸಿನ ವಿಷಯದಲ್ಲಿ ತನಗೆ ಅಲ್ಪ ಸಮಾಜಕ್ಕೆ ಸರ್ವಸ್ವ ಎಂಬ ಸಿದ್ಧಾಂತ . ತನ್ನ ಮಗಳ ಮದುವೆಗೆ ಹಣ ಸಾಲದೆ ಸಾಲ ಪಡೆದ ಸಂಧರ್ಭವೂ ಇತ್ತು . ತನ್ನ ಕುಟುಂಬ ನಿರ್ವಹಣೆಗೆ ಎಷ್ಟು ಬೇಕೋ ಅಷ್ಟೇ ಸಂಬಳ ಪಡೆಯುತ್ತಿದ್ದರು . ಅದುವೇ ಸಾಕಾಗುತ್ತಿರಲ್ಲಿಲ್ಲ . ಪ್ರಧಾನ ಮಂತ್ರಿಯಾಗಿದ್ದರೂ ಒಂದು ಸಾಧಾರಣ ಮನೆಯಲ್ಲೇ ವಾಸಿಸುತ್ತಿದ್ದರು . ಇಂಥಹ ಸಾತ್ವಿಕ ಪರಿಸರದಲ್ಲಿ ಬೆಳೆದ ಬಾಜಿರಾಯ ಮತ್ತೊಬ್ಬ ಶಿವಾಜಿಯಾಗದೆ ಇರುತ್ತಾನೆಯೇ ? . ಅವನ ಸಾಮರ್ಥ್ಯದ ಬಗ್ಗೆ ಛತ್ರಪತಿ ಷಾಹು ಮಹಾರಾಜರಿಗೆ ಆಗಲೇ ಒಂದು ಕಣ್ಣಿತ್ತು .

ತಂದೆ ವಿಶ್ವನಾಥ ಭಟ್ಟರ ಮರಣಾನಂತರ ಷಾಹು ಮಹಾರಾಜರು ಇಪ್ಪತ್ತು ವರ್ಷದ ಹರೆಯ ಬಾಲಕ ಬಾಜಿರಾಯನನ್ನೇ ತನ್ನೆ ಪ್ರಧಾನ ಮಂತ್ರಿ ( ಪೇಶ್ವೆ ) ಯೆಂದು ಆಯ್ಕೆ ಮಾಡಿದರು . ಅನೇಕರ ವಿರೋಧಗಳ ಹೊರತಾಗಿಯೂ .

ಷಾಹು ಮಹಾರಾಜರಿಗೆ ಬಾಜಿರಾಯನ ಮೇಲೆ ಅದೆಷ್ಟು ನಂಬಿಕೆಯೆಂದರೆ ಎಲ್ಲಾದರೂ ಒಂದು ಲಕ್ಷ ಸೇನೆ ಮತ್ತು ಬಾಜಿರಾಯನ ನಡುವೆ ಆಯ್ಕೆಯಿಟ್ಟರೆ ತಾನು ಬಾಜಿರಾಯನನ್ನೇ ಆಯ್ಕೆ ಮಾಡುತ್ತೇನೆ ಎಂದಿದ್ದರಂತೆ .

ನಂತರ ಭಾರತ ಕಂಡ ಆ ಇಪ್ಪತ್ತು ವರ್ಷಗಳು ಬಾಜಿರಾಯನ ವಿಜಯಭೇರಿ ಸಾವಿರ ವರ್ಷಗಳ ಕಗ್ಗೊಲೆ ದಬ್ಬಾಳಿಕೆಗಳಿಗೆ ಖಡ್ಗ ಪ್ರಹಾರ ನೀಡಿ ಮತ್ತೊಂದು ಸುವರ್ಣ ಯುಗಕ್ಕೆ ನಾಂದಿ ಹಾಡಿತ್ತು .

प्रस्थापित स्वराज्य महाराष्ट्रे शिवाजिना

स्वराज्यं बाजीरावेण साम्राज्ये प्रवर्तितमः