Friday 20 January 2017

ಸಾಮನಾದ ಸಂಹಾರ : ಭಾಗ ೨


೧೭೦೯ ನವೆಂಬರ್ ೨೬ ರ ರಾತ್ರಿ

ಒಂದು ಬೃಹತ್ ಸೇನೆಯೊಂದಿಗೆ ಬಂದಾ ಬಹಾದ್ದೂರ್ ಅತಿ ವೇಗದಲ್ಲಿ ನಗರದ ದ್ವಾರ ಪ್ರವೇಶಿಸಿದ . ನಗರದ ದ್ವಾರ ಪಾಲಕರನ್ನು ತಲುಪುತ್ತಿದ್ದಂತೆಯೇ ಅವರನ್ನು ಬರ್ಬರವಾಗಿ ಹತ್ಯೆಗೈದು ನಗರ ಪ್ರವೇಶಿಸಿದರು . ಈ ಹಠಾತ್ತನೆ ನಡೆದ ಆಕ್ರಮಣಕ್ಕೆ ಕೇವಲ ತಮ್ಮ ರಕ್ಷಣೆಯನ್ನು ಮಾತ್ರ ಮಾಡಿಕೊಳ್ಳುತ್ತ ಮೈಮರೆತಿದ್ದ ಅಮೀರರು ಮತ್ತು ಫೌಜುದಾರರು ಒಮ್ಮೆಲೇ ಭಯಭೇತರಾದರು . ಅವರ ಬಹುತೇಕ ಪಡೆಯನ್ನು ತಮ್ಮ ಖಾಸಗಿ ರಕ್ಷಣೆಗಾಗಿ ಮಾತ್ರ ಬಳಸುತ್ತಿದ್ದರು . ಹಾಗಾಗಿ ಅವರ ಸೇನೆ ಇಪ್ಪತ್ತೆರಡು ವಿಭಾಗಗಳಲ್ಲಿ ಎಲ್ಲೆಡೆ ಚದುರಿ ಪರಿಣಾಮಕಾರಿ ರಕ್ಷಣೆಗೆ ನಾಲಾಯಕ್ ಆಗಿದ್ದವು . ಒಟ್ಟಿನಲ್ಲಿ ಎಲ್ಲಾ ಬಂದಾನ ಅನುಕೂಲಕ್ಕೇ ನಡೆಯುತ್ತಿತ್ತು . ಅಮೀರರ ಅಭೇದ್ಯ ಕೋಟೆಗಳನ್ನು ಪ್ರವೇಶದ್ವಾರಗಳಲ್ಲಿ ಮುತ್ತಿಗೆ ಹಾಕಿ ಬಂದಿಖಾನೆಗಳಾದವು . ಸಮರಕ್ಕೆ ತಕ್ಕಂತೆ ಅವರ ಸೇನೆಯನ್ನು ಚಲಿಸಲೂ ಅಸಾಧ್ಯವಾಯಿತು . ಫತ್ತೇ ಸಿಂಗನ ಯೋಜನೆ ಸಮರ್ಥವಾಗಿ ನೆರವೇರಿತು .ಶತ್ರುಗಳ ಕೈಕಟ್ಟಿತು .  ಒಮ್ಮೆ ಕೊನೇ ಬಾರಿ  ಫತ್ತೇ ಸಿಂಗ್ ಎಲ್ಲ ಹವೇಲಿಗಳು ಬಂದಿಯಾಗಿದೆಯೋ ಇಲ್ಲವೋ ಎಂದು ಗಸ್ತು ತಿರುಗಿ ಪಕ್ಕ ಮಾಡಿಕೊಂಡ . ಇನ್ನು ಅಂತಿಮ ಪ್ರಹಾರ ಕೊಡುವುದೊಂದೇ ಬಾಕಿ .

ನಂತರ ಮಿಕ್ಕ ಎಲ್ಲ ಪಡೆಗಳು ಬಂದಾ ನೇತೃತ್ವದಲ್ಲಿ ಜಲಾಲುದ್ದೀನನ ಹವೇಲಿಯ ಮೇಲೆ ಲಗ್ಗೆ ಇಟ್ಟವು . ಆ ಹವೇಲಿಯ ಮೇಲ್ಛಾವಣೆಯಿಂದ ಗುಂಡಿನ ಧಾಳಿ ಮಾಡಿದರು . ಇದರಿಂದ ಸ್ವಲ್ಪ ಘಾಸಿಯುಂಟಾಯಿತು . ಈ ಗದ್ದಲದ ಮಧ್ಯ ಒಬ್ಬ ಬಂದಾನ ಸೈನಿಕ ಗುಂಡು ತಲುಪದ ಮರೆಯಲ್ಲಿ ಒಂದು ಗೋಡೆ ಸಮೀಪದ ಬಳಸುಹಾದಿಯನ್ನು ಗಮನಿಸಿದ . ಅಲ್ಲಿ ತನ್ನ ಸಂಗಡಿಗರೊಂದಿಗೆ ಬ್ಯಾಟರಿಂಗ್ ರಾಮ್ ನನ್ನು ನುಗ್ಗಿಸಿ ಗೋಡೆ ಒಡೆದರು . ನಿರೀಕ್ಷಿತ ಸಮಯಕ್ಕಿಂತ ತುಸು ಬೇಗನೇ ಈ ಕೆಲಸ ಮುಗಿಯಿತು . ಹವೇಲಿಯ ಒಳಗೆ ಪ್ರವೇಶ ಸಿಕ್ಕಿತು .
ಅದರ ನಂತರ ಸಿಖ್ ಸೈನಿಕರಲ್ಲದೇ ಇತರ ರೈತರು ಉಳಿದೆಲ್ಲ ನಾಗರಿಕರೂ ಪ್ರವಾಹದಂತೆ ಒಳನುಗ್ಗಿದರು . ಹವೇಲಿಯ ಒಳಗಿದ್ದವರನ್ನು ಯಾವ ವಯಸ್ಸು ಲಿಂಗ ಭೇದವಿಲ್ಲದೇ ಕತ್ತಿಗೆ ಬಲಿಕೊಡಲಾಯಿತು . ಅದೆಷ್ಟೋ ವರ್ಷಗಳ ದಬ್ಬಾಳಿಕೆ ಸಾವು ನೋವಿನ ಸೇಡನ್ನು ಈಗ ತೀರಿಸಿಕೊಂಡರು . ಯಾವ ಮಟ್ಟಕ್ಕೆ ಇದು ವಿಪರೀತವಾಯ್ತೆಂದರೆ ಈ ವಿಷ ಪರಂಪರೆಯ ಮನೆಯ ಕೊನೆ ಸದಸ್ಯನೂ ಹತ್ಯೆಯಾಗುವತನಕ ಅಲ್ಲಿನ ಜನ ನೆತ್ತರು ಹರಿಸಿದರು . 
ಬಂದಾನು ಜನರ ಕ್ರೋಧಕ್ಕೆ ಹವೇಲಿಯನ್ನು ಬಿಟ್ಟು ಹೊರಬಂದ . ಒಂದಾದರೊಂದಂತೆ ಎಲ್ಲ ಹವೇಲಿಗಳು ಕುಸಿದವು ಮತ್ತು ಒಳಗಿದ್ದ ಎಲ್ಲರೂ ಬಲಿಯಾಗತೊಡಗಿದರು .

ಸೂರ್ಯಾಸ್ತವಾಗುವವೊಳಗೆ ಸಾಮನಾದ ಸಮರ ಮುಗಿಯಿತು . ಒಮ್ಮೆ ಸಂಪತ್ಭರಿತವಾಗಿದ್ದ ನಗರ ಈಗ ಪಾಳು ಬಿದ್ದಿದೆ . ಬೀದಿ ಬೀದಿಯಲ್ಲೂ ರಕ್ತದ ಹೊಳೆ ಹರಿಯುತ್ತಿದೆ.  ಸುಮಾರು ೧೦ ಸಾವಿರಕ್ಕಿಂತ ಅಧಿಕ ಜನ ಒಂದೇ ದಿನದಲ್ಲಿ ಸತ್ತರು .
ಜಲಾಲುದ್ದೀನ್ ತನ್ನ ಹವೇಲಿಯಿಂದ ತಪ್ಪಿಸಿಕೊಳ್ಳಲು ಮೆಲ್ಲನೆ ಹೊರ ನಡೆಯುತ್ತಿದ್ದ . ಫತ್ತೇ ಸಿಂಗ್ ಅವನನ್ನು ಹಿಡಿದು ಒಂದೇ ಏಟಿನಿಂದ ಅವನ ರುಂಡ ಹಾರಿಸಿದ . ತೇಗ ಬಹಾದ್ದೂರರನ್ನು ಕೊಂದ ಈ ಪಾತಕಿಯ ತಲೆಯನ್ನು ಈಟಿಯ ಮೇಲೆ ಚುಚ್ಚಿ ನಗರ ಒಂದು ಪ್ರವೇಶ ದ್ವಾರದಲ್ಲಿ ನೆಟ್ಟರು .  ಷಾಶಾಲ್ ಬೇಗ್ ಮತ್ತು ಭಾಷಲ್ ಬೇಗರಿಗೂ ಇದೇ ರೀತಿ ಗತಿ ಕಾಣಿಸಿದರು .

ಸಂಜೆಯ ಹೊತ್ತಿನಲ್ಲಿ ಧಗಧಗನೆ ಉರಿಯುತ್ತಿದ್ದ ನಗರ ಚಳಿಗೆ ಒಳ್ಳೆ ಬಿಸಿ ಮುಟ್ಟಿಸುತ್ತಿತ್ತು . ಮಟ್ಟುಳಿದ ಕಲ್ಮಶಗಳನ್ನು ಅಗ್ನಿ ಸುಡುತ್ತಾ ವಾಯುಮಂಡಲದಲ್ಲಿ ಒಂದು ತೀಕ್ಷ್ಣ ದುರ್ಗಂಧ ಸೂಸುತ್ತಿತ್ತು .

ಜಲಾಲುದ್ದೀನನ ಆಸ್ಥಾನವಾಗಿದ್ದ ಕೋಣೆಯಲ್ಲಿ ಬಂದಾನು ಬಿಡಾರ ಹೂಡಿದ್ದ . ಬಂದಾನು ಶಾಂತನಾಗಿ ಚಿಂತಾಮಗ್ನನಾಗಿ ಕುಳಿತಿದ್ದ . ಅವನನ್ನು ಸಮಾಧಾನಿಸಲೆಂದು ಭುಜದ ಮೇಲೆ ಭಾಯಿ ಬಿನೋದ್ ಕೈ ಇಟ್ಟ ಮತ್ತು ಬಳಿ ಕುಳಿತ . ಬಂದಾನಲ್ಲಿ ಒಂದು ಸಣ್ಣ ದುಃಖದ ನಗೆ ಬಂತು . “ ಬಾ ಭಾಯಿ , ಇವತ್ತಿನ ದಿನ ತುಂಬಾ ಶ್ರಮದಾಯಕವಾಗಿತ್ತು . ಸ್ವಲ್ಪ ವಿಶ್ರಾಂತಿ ತೆಗೆದುಕೋ  ”. ಬಂದಾನು ಆಲೋಚನೆ ಮಾಡುತ್ತಾ – “ ಗುರುಗಳ ಆಜ್ಞೆ ಯಾಗಿದ್ದು ಉದಾತ್ತ ಗುಣದಿಂದ ವಿಜಯ ಸಾಧಿಸಬೇಕೆಂದು ಅದಕ್ಕಾಗಿ ಈ ರಕ್ತಪಾತವಿಲ್ಲದೇ ಬೇರೆ ಯಾವ ಮಾರ್ಗವಿರುತ್ತಿತ್ತೋ . . .  ”. ಬಂದಾನ ಮಾತಿನ ಸ್ವರದಲ್ಲಿ ಸಾಮನಾದ ವಿಜಯ ನಗಣ್ಯದಂತೆ ತೋರಿತು . ಬಿನೋದನು ನುಡಿದ – “ ನಮಗೂ ಕೂಡ ರಕ್ತಪಾತವಿಲ್ಲದೆಯೇ ಸಾಧಿಸಬೇಕೆಂದಿತ್ತು , ಆದರೆ ಬೇರೆ ದಾರಿಯಿಲ್ಲ . ಇಲ್ಲಿನ ಜನ ಶತಮಾನಗಳ ಸಾವು ನೋವನ್ನು ಅನುಭವಿಸಿದ್ದಾರೆ ಅದರ ಕ್ರೋಧವು ಇವರನ್ನು ಕಾನೂನನ್ನು ಕೈಗೆ ತೆಗೆದುಕೊಳ್ಳುವಂತೆ ಮಾಡಿದೆ . ಈ ಮೋಘಲರು ತಾವು ಮಾಡಿದ್ದನ್ನೇ ಅನುಭವಿಸಿದರಷ್ಟೇ . ಅದಕ್ಕಾಗಿ ನಾವು ಜನರನ್ನು ದೂಷಿಸಲಾಗುವುದಿಲ್ಲ . ” . ಬಂದಾನಿಗೆ ಸಮಾಧಾನಕರವೆನಿಸಲಿಲ್ಲ – “ ಆದರೂ ಈ ರೀತಿ ಸಂಪೂರ್ಣ ಸೇಡು ತೀರಿಸಿಕೊಳ್ಳುವ ಅವಶ್ಯಕತೆಯಿರಲಿಲ್ಲ . ನಾವು ನಮ್ಮ ಜನಕ್ಕೆ ಶತ್ರುಗಳನ್ನು ಕ್ಷಮಿಸುವಂತಹ ಗುರುಗಳ ಸಂದೇಶ ತಿಳಿಸಬಹುದಿತ್ತು  ”. ಆಗ ಬಿನೋದ – “ ಯಾವ ನೈತಿಕ ಭೋದನೆಯು ಶೋಷಿತ ಮನಸ್ಸಿಗೆ ಸಾಂತ್ವನ ನೀಡಲು ಸಾಧ್ಯ ? ಗುರುಗಳ ಉಪದೇಶ ಏನೂ ವ್ಯತ್ಯಾಸ ತರದು . ಹಾಗೇನಾದರೂ ಇವರಿಗೆ ಆ ಹೊತ್ತಿನಲ್ಲಿ ನಾವು ಬೋಧನೆ ಮಾಡಿದರೆ ಅವರ ಆಕ್ರೋಶ ನಮ್ಮ ವಿರುದ್ಧವೇ ತಿರುಗಿ ಬಿದ್ದೀತು . ಭಾಯಿ ಬಂದಾ ಸುಮ್ಮನೆ ಭಾವನೆಗಳಿಗೆ ಮರುಳಾಗಿ ದಣಿಯಬೇಡ . ನಿನಗೆ ತಿಳಿದಂತೆ ಪ್ರಪಂಚವು ದೈವೇಚ್ಛೆಯಂತೆ ನಡೆಯುತ್ತದೆ . ಆ ಅಮೀರರಿಗೆ ತಮ್ಮ ಪಾಪದ ಫಲವೇ ಲಭಿಸಿದೆ . ಅವರ ಪಾಪಕ್ಕಿಂತ ಜನರ ತಪ್ಪೇನೂ ದೊಡ್ಡದಲ್ಲ . ಇದಕ್ಕೆ ನೀನು ಕಾರಣವೆಂದು ಭಾವಿಸಬೇಡ  ”.

ಸಾಮನಾದ ಸಮರದಲ್ಲಿ ಬಂದಾನ ಸೈನಿಕರು ಅಪಾರ ಸಂಪತ್ತನ್ನು ಕೊಳ್ಳೆಹೊಡೆದರು . ಅದರಲ್ಲಿ ಒಂದು ದೊಡ್ಡ ಮೊತ್ತ ಮುಂದಿನ ಸಂಗ್ರಾಮಕ್ಕೆ ತೆಗೆದಿಟ್ಟು ಉಳಿದನ್ನು ಅವರವರ ಮಧ್ಯೆ ಸಮಾನವಾಗಿ ಹಂಚಿಕೊಂಡರು .
ಸಾಮನಾದ ಸಮರ ಬಂದಾ ಬಹಾದ್ದೂರನ ಚೊಚ್ಚಲ ಜಯ . ಹದಿನೆಂಟನೇ ಶತಮಾನದ ಆದಿಯಲ್ಲಿ ಅವಸಾನದ ಹಾದಿಯಲ್ಲಿದ್ದ ಮೊಘಲ್ ಸಾಮ್ರಾಜ್ಯಕ್ಕೆ ಉತ್ತರದಲ್ಲಿ ಬಂದಾ ಮೊದಲ ಕೊಡಲಿ ಪೆಟ್ಟು ಕೊಟ್ಟ . ಇನ್ನೂ ಮುಂದಿನ ವಿಜಯಯಾತ್ರೆಯಿಂದ ಪಂಜಾಬನ್ನು ಮುಕ್ತಗೊಳಿಸಿ ಸಿಖ್ ಸಾಮ್ರಾಜ್ಯವನ್ನೂ ಕಟ್ಟಿದ .


ಸಂಭವಾಮಿ ಯುಗೇ ಯುಗೇ ಎಂಬ ಗೀತೆಯ ವಾಣಿಯನ್ನು ಪುನಃ ನಿರೂಪಿಸಿದ ಬಂದಾ .

Tuesday 17 January 2017

ಸಾಮನಾದ ಸಂಹಾರ



ಸಾಮಾನಾ, ಪಂಜಾಬಿನ ಪಟಿಯಾಲದಿಂದ ಎಂಟು ಕಿ ಮೀ ನೈರುತ್ಯಕ್ಕೆ ಬರುವ ಪ್ರದೇಶ . ಈ ಸ್ಥಳ ಉತ್ಕಷ್ಟ ಮಟ್ಟದ ಹತ್ತಿ ಬೆಳೆಗೆ ಪ್ರಸಿದ್ಧ . ದೂರದ ಯುರೋಪಿನಲ್ಲಿಯೂ ಜಗತ್ಪ್ರಸಿದ್ಧಿ . ಹಾಗಾಗಿ ಈ ಪ್ರದೇಶ ಸಂಪತ್ಭರಿತ ಮತ್ತು ಶಕ್ತಿಶಾಲಿ ನಗರಿ . ಆದರೆ ಮೊಘಲ್ ಸಾಮ್ರಾಜ್ಯದ  ವರ್ಷಗಟ್ಟಲೆ ದುರಾಡಳಿತದಿಂದ ರೈತರು ಇಲ್ಲಿನ ಫೌಜದಾರರಿಂದ ಮತ್ತು ಸಾಮಂತರಿಂದ ಬೇಸತ್ತಿದ್ದರು . ಸಾಮಾನ್ಯರು ಈ ದುರಾಡಳಿತವನ್ನು ದ್ವೇಶಿಸುತ್ತಿದ್ದರೂ ಅವರ ವೇದನೆ ಕೇಳುವವರು ಯಾರೂ ಇರಲಿಲ್ಲ . ಎಲ್ಲಾದರೂ ಸೊಲ್ಲೆತ್ತುವ ಧೈರ್ಯ ಮಾಡಿದರೆ ಅದಕ್ಕೆ ತಕ್ಕ ಕ್ರೌರ್ಯದ ಉತ್ತರ ಕಾದಿರುತ್ತಿತ್ತು . ಅಲ್ಲಿನ ಉಸ್ತುವಾರಿಯನ್ನು ಒಬ್ಬ ಫೌಜುದಾರನ ಅಡಿಯಲ್ಲಿ ಹೆಚ್ಚೆಂದರೆ ೨೨ ಅಮೀರರು ನೋಡಿಕೊಳ್ಳುತ್ತಿದ್ದರು . ಆ ಅಮೀರರು ಮೋಘಲರು  ಅಥವಾ ಸಯ್ಯದರಾಗಿರುತ್ತಿದ್ದರು . ಪ್ರತಿಯೊಬ್ಬರು ಒಂದೊಂದು ಭದ್ರಕೋಟೆಯೊಳಗಿನ ಐಷಾರಾಮಿ ಅರಮನೆಯೊಳಗಿರುತ್ತಿದ್ದರು . ಅಲ್ಲಿಂದಿಲ್ಲಿಗೆ ಓಡಾಡಲು ಪಲ್ಲಕ್ಕಿಯನ್ನು ಬಳಸುತ್ತಿದ್ದು ನಿಶ್ಚಿಂತೆಯಿಂದ ಮೈಮರೆತಿದ್ದರು . ಇದರಿಂದಾಗಿ ಆಡಳಿತ ಅಷ್ಟೇ ಹದಗೆಟ್ಟು ಜನರ ಪಾಡು ಕೇಳುವವರಿಲ್ಲ .
ಮತ್ತೆ ಈ ಅಮೀರರಿಗೆ ಎಷ್ಟೋ ವರ್ಷಗಳಿಂದ ಬಾಹ್ಯ ಧಾಳಿಗಳ ಅನುಭವವೂ ಇರಲಿಲ್ಲ .

ಆದರೆ ಈಗ ಬಂದಾ ಬಂದಿದ್ದಾನೆ .

ಬಂದಾನು ಅಲ್ಲಿಂದ ಇಪ್ಪತ್ತು ಕಿ ಮೀ ದೂರದಲ್ಲಿ ಬಿಡಾರ ಹೂಡಿ ತನ್ನ ಸಂಗಡಿಗರೊಂದಿಗೆ ಈ ಪಟ್ಟಣದ ಮೇಲೆ ಧಾಳಿ ಮಾಡಲು ಸಂಚು ರೂಪಿಸುತ್ತಿದ್ದಾನೆ . ಅವನಿಗೆ ಇತ್ತೀಚಿಗಷ್ಟೇ ಸಿಕ್ಕ ಮಾಹಿತಿ ಪ್ರಕಾರ ಅಲ್ಲಿನ ಫೌಜುದಾರ ಸಿಖ್ಖರ ಧಾಳಿಯ ಸಂಭಾವನೆಯನ್ನು ಸಂಪೂರ್ಣ ಅಳ್ಳಗೆಳೆದಿದ್ದಾನಂತೆ . ಫೌಜುದಾರನ ಪ್ರಕಾರ ಎಲ್ಲಾದರೂ ಸಿಖ್ಖರು ಹೊರ ಗೋಡೆಯನ್ನು ಒಡೆದು ಒಳ ಬರಲು ಸಫಲರಾದರೂ ಒಳಗಿನ ಅಭೇದ್ಯ ಕೋಟೆಯಲ್ಲಿ ಸಿಕ್ಕಿ ಕೊಲ್ಲಲ್ಪಡುತ್ತಾರೆಂದು .
ಬಂದಾನು ಫತೇ ಸಿಂಗನನ್ನು ಸೇನಾಧಿಪತಿಯನ್ನಾಗಿ ನೇಮಿಸಿದ . ಫತೇನ ಯೋಜನೆ ಪ್ರಕಾರ ಒಂದಿಷ್ಟು ಸಣ್ಣ ಸಣ್ಣ ತುಕಡಿಗಳಲ್ಲಿ ಸೇನೆಯನ್ನು ವಿಭಜಿಸಿ ಪ್ರತಿಯೊಂದು ತುಕಡಿಗೆ ಒಬ್ಬೊಬ್ಬ ನಾಯಕನನ್ನು ನೇಮಿಸಿದ . ಪ್ರತಿಯೊಂದು ತುಕಡಿ ಆ ಅಮೀರರ ಪ್ರತಿಯೊಂದು ಹವೇಲಿಯನ್ನು ಹೊರಗಿನಿಂದ ಬಂಧಿಸಬೇಕೆಂದು .  ಅದರಲ್ಲಿ ಸಯ್ಯದ್ ಜಲಾಳುದ್ದೀನನ ಭದ್ರಕೋಟೆ ದೊಡ್ಡದಾಗಿತ್ತು . ಅದರ ಮೇಲ್ಛಾವಣೆಯನ್ನು ವಶಪಡಿಸಿಕೊಂಡರೆ ಸುತ್ತಮುತ್ತಲಿನ ಹವೇಲಿಗಳನ್ನು ನಿಯಂತ್ರಿಸಬಹುದು . ಹೀಗೆಂದು ಒಂದು ರಣನೀತಿ ಮಾಡಿದ .

ಫೌಜುದಾರನ ಅರಮನೆಯಲ್ಲೂ ಅಮೀರರು ಒಂದು ಯುದ್ಧದ ಬೈಠಕ್ ನಡೆಯುತ್ತಿತ್ತು . ಸಿಖ್ಖರು ಧಾಳಿಗೆ ಸಜ್ಜಾಗಿದ್ದಾರೆಂದು ವದಂತಿ ಹಬ್ಬಿದೆಯಲ್ಲಾ   ಎಂದು ಫೌಜುದಾರನೇ ಚರ್ಚೆಯನ್ನು ಮುಂದಿಟ್ಟ .
“ ನಾವೇನಿಲ್ಲಿ ವದಂತಿಗಳನ್ನು ಚರ್ಚೆ ಮಾಡಲು ಕೂತಿದ್ದೇವೆಯೇ ? ” ಮಧ್ಯದಲ್ಲಿ ಸಯ್ಯದ್ ಶಮ್ಷುದ್ದೀನ್ ಬಾಯ್ತೆಗೆದ . “ ಯಾವಾಗಳಿಂದಲೋ ಈ ಮಾತು ಚಾಲ್ತಿಯಲ್ಲಿದೆ ಆದರೆ ಇದಕ್ಕೆ ಯಾವ ಆಧಾರವೂ ಇಲ್ಲ  ”. ಎಲ್ಲ ಹುಬ್ಬೇರಿಸಿ ಬಾಯ್ಬಿಟ್ಟು ನೋಡುತ್ತಿದ್ದರು . “ ಮಾಡಲಿಕ್ಕೆ ಬೇರೇನೂ ಕೆಲಸವಿಲ್ಲದಿದ್ದರೆ ನಾನು ಹೊರನಡೆಯುತ್ತೇನೆ ” ಎಂದು ಆರ್ಭಟಿಸಿದ . ಆದರೆ ಮೋಘಲರ ಪ್ರತಿನಿಧಿಯಾದ ಫೌಜುದಾರನ ಎದುರು ಕಾಲ್ಕೇಳಲು ಅಷ್ಟು ಧೈರ್ಯ ಬರದೇ ತೆಪ್ಪಗೆ ಕುಳಿತ .
ಶಮ್ಷುದ್ದೀನನ ಉದ್ದಟತನವನ್ನು ಅಳ್ಳಗೆಳೆಯುತ್ತಾ ಫೌಜುದಾರ ಮುಂದುವರೆದ “ ಸಿಖ್ಖರೇನೋ ನಮಗೆ ಮುಳ್ಳಾಗಿದ್ದಾರೆಂದು ನಮಗೆಲ್ಲಾ ಗೊತ್ತಿದೆ. ಆದರೆ ಹೆಚ್ಚೆಂದರೆ ಅವರೇನು ಮಾಡಿಯಾರು ? ಅವರದ್ದು ಪೋಲಿ ಪುಂಡರ ಆಶಿಸ್ತಿನ ಸೇನೆಯಷ್ಟೇ ಅವರು ನಮ್ಮ ಶಿಸ್ತಿನ ಸಶಸ್ತ್ರ ಸೇನೆಯನ್ನು ಹೇಗೆ ಎದುರಿಸಿಯಾರು ? ಆದರೆ ನನ್ನ ಚಿಂತೆಯೆಂದರೆ ರೈತರು ಮತ್ತು ಕೂಲಿ ಕಾರ್ಮಿಕರೂ ನಮ್ಮ ಮೇಲಿನ ಸೇಡಿಗಾಗಿ ಅವರ ಜೊತೆ ಸೇರಿದ್ದಾರೆಂದು ಅಧಿಕ ಸಂಖ್ಯೆಯಲ್ಲಿ ಸೇರಿದ್ದಾರಂತೆ  ” . ಫೌಜುದಾರನ ಆ ಕೊನೆಯ ಮಾತನ್ನು ಕೇಳಿ ಎಲ್ಲ ಗೊಳ್ಳೆಂದು ನಕ್ಕಿದರು . “ ಆದೆಲ್ಲಿಂದ ಕೇಳಿದ್ಯೋ ಈ ಬಡಬಗ್ಗರೆಲ್ಲ ನಮಗೆ ಸಡ್ಡು ಹೊಡೆಯುತ್ತಾರೆಂದು ... ?  “ ಎಂದ ಶಮ್ಷುದ್ದೀನ್ . “ ಎಲ್ಲಾದರೂ ಒಬ್ಬ ಎದುರು ನಿಲ್ಲುವ ದುಸ್ಸಾಹಸ ಮಾಡಿದರೂ ನಮ್ಮ ಒಂದು ಹೊಡೆತಕ್ಕೆ ಕಂಗೆಟ್ಟು ತತ್ಕ್ಷಣವೇ ಕಾಲಿಗೆ ಬೀಳುತ್ತಾರೆ  ”. ಇದಕ್ಕೆ ಎಲ್ಲ ಅಮೀರರು ತಲೆಯಾಡಿಸಿದರು . ಅವರಿಗೆ ಎಳ್ಳಷ್ಟೂ ಸಿಖ್ಖರ ಭಯವಿರಲಿಲ್ಲ . ಆದರೆ ಒಬ್ಬ ಅಮೀರ ಜಲಾಲುದ್ದೀನ್ “ ಶತ್ರುವನ್ನು ಕಡೆಗಾಣಿಸುವುದು ಅಷ್ಟು ಸಮಂಜಸವಲ್ಲ , ಫೌಜುದಾರ ಏನು ಹೇಳುತ್ತಾರೋ ಒಮ್ಮೆ ಕೇಳೋಣ  ” ಎಂದ . ( ಈ ಜಲಾಲುದ್ದೀನ್ ಗುರು ತೇಗ್ ಬಹಾದ್ದೂರರ ಹತ್ಯೆಗೆ ಮುಖ್ಯ ರುವಾರಿಯಾಗಿದ್ದ  ). ಅದಕ್ಕೆ ಶಮ್ಷುದ್ದೀನ್ “ ನಿನಗೆ (ಜಲಾಲುದ್ದೀನ್) ತೇಗ್ ಬಹಾದ್ದೂರರ ಸಾವು ನಿನ್ನ ತಲೆ ಕೆಡಿಸಿದೆ , ನೆರಳಿಲ್ಲದ ಜಾಗ ಕಂಡರೂ ಭೂತ ಭೂತ ಎಂದು ಭಯ ಬೀಳುತ್ತೀ ” ಎಂದು ಲೇವಡಿ ಮಾಡಿದ . ವಾಸ್ತವದಲ್ಲಿ ಜಲಾಲುದ್ದೀನ್ ಪಂಜಾಬಿಗೆ ಬಂದಿದ್ದ ಸಿದ್ದು ಕೇಳಿದಾಗಲಿಂದ  ಜಲಾಲುದ್ದೀನನ ಬುದ್ದಿ ಕೆಟ್ಟಿತ್ತು . ಶಮ್ಷುದ್ದೀನನು ಮತ್ತೆ ಅವನ ಕಾಲೆಳೆಯುತ್ತಾ – “ ನಿನಗೆ ಬೇಕಿದ್ದರೆ ನನ್ನ ಕೆಲವು ಪ್ರಯೋಜನಕ್ಕೆ ಬಾರದ ಅಬಸ್ಸೇನಿಯಾದ ಯೋಧರನ್ನು ಕಳಿಸುತ್ತೇನೆ , ಹೇಳಿಕೇಳಿ ನಿನ್ನ ಹವೇಲಿ ಇರುವ ನಮ್ಮೆಲ್ಲರ ಹವೇಲಿಗಳಿಗಿಂತ ಸಧೃಢ ವಾಗಿದೆ ... ಆದರೂ ...  ”.  ಫೌಜುದಾರನಿಗೆ ಶಮ್ಷುದ್ದೀನನ ಮಾತು ಕಿರಿಕಿರಿಯುಂಟಾಯಿತು . ಹಾಗೆ ಸ್ವಲ್ಪ ಹೊತ್ತು ಇವರೆಲ್ಲರ ಹರಟೆ ಮುಂದುವರೆಯುತ್ತಿತ್ತು .


ಹರಟೆ ಹೊಡೆಯುತ್ತಿದ್ದ ಈ ಬೆಪ್ಪುಗಳಿಗೆ ಬಂದಾ ಮತ್ತು ಅವನ ಸಂಗಡಿಗರು ಮರಣ ಶಾಸನ ಬರೆದಿಟ್ಟಾಗಿತ್ತು . ಅವರ ಪ್ರಮುಖ ಗುರಿ ತೇಗ ಬಹಾದ್ದೂರರನ್ನು ಕೊಂದ ಸಯ್ಯದ್ ಜಲಾಲುದ್ದೀನ ಮತ್ತು ಗುರು ಗೋವಿಂದ ಸಿಂಗರ ಕಿರಿ ಮಕ್ಕಳಾದ ಜೋರಾವರ್ ಸಿಂಗ್ ಮತ್ತು ಫತ್ತೇ ಸಿಂಗ್ ರನ್ನು ಕೊಂದ ಷಾಶಲ್ ಬೇಗ್ ಮತ್ತು ಭಾಷಲ್ ಬೇಗ್ ಮತ್ತು ಒಳಿದ ಎಲ್ಲ ಪ್ರೇತಾತ್ಮಗಳನ್ನು ಯಮಾಸದನಕ್ಕೆ ಅಟ್ಟುವುದು .