ಹದಿನಾಲ್ಕನೇ ಶತಮಾನದ ಆದಿಯಲ್ಲಿ ಅಲ್ಲಾವಿದ್ದೀನ್ ಖಿಲ್ಜಿಯ ಮಲಿಕ್ ಖಾಫರ್
ನೇತೃತ್ವದ ಸೇನೆ ದೇವಗಿರಿ , ವಾರಂಗಲ್ , ಹಂಪಿ , ತಂಜಾವೂರ್ ಮತ್ತು ಮಧುರೈ ತನಕವೂ ದಂಡಯಾತ್ರೆ
ನಡೆಸಿ ಕೊಲೆ ಸುಲಿಗೆ ಮತ್ತು ದೇವಸ್ತಾನಗಳ ಲೂಟಿ ಮಾಡುತ್ತಿದ್ದ. ದುರ್ದೈವವೆಂಬಂತೆ ಆಗ ಹೊಯ್ಸಳ
ಸಾಮ್ರಾಜ್ಯದ ಅವನತಿಯ ಕಾಲ. ಮತ್ತು ಪಾಂಡ್ಯನ್ನರ ರಣ
ವಿಫಲತೆಯಿಂದಾಗಿ ಖಾಫಿರನಿಗೆ ಮಧುರೈತನಕವೂ ಅಡೆ ತಡೆಯಿಲ್ಲದೇ ಮುನ್ನುಗ್ಗಿ ಹಿಂದೂ
ಸಾಮ್ರಾಜ್ಯಗಳನ್ನು ಆಹುತಿ ತೆಗೆದುಕೊಳ್ಳುತ್ತಿದ್ದ. ಇಡೀ ದಕ್ಷಿಣ ಭಾರತ ಈ ಭೀಕರ ಧಾಳಿಗೆ
ತತ್ತರಿಸಿತು.
ಖಾಫರನ ನಂತರ 1321 ರಲ್ಲಿ ಪುನಃ ಗಿಯಾಸುದ್ದೀನ್ ತುಘ್ಲ್ಕಖ್ ನ ಮಗ ಉಲುಘ್ ಖಾನ್
ವಾರಂಗಲ್ ಪ್ರಾಂತದ ಖಾಕಟೀಯನ್ನರನ್ನು ಸೋಲಿಸಿದ. ಆಗ ಆ ಖಾಕಟೀಯ ಸೇನೆಯಲ್ಲಿ ಸೇನಾನಾಯಕರಾಗಿದ್ದ
ಬುಕ್ಕರಾಯ ಮತ್ತು ಹರಿಹರರನ್ನು ಸೆರೆಯಾಳರನ್ನಾಗಿಸಿ ದೆಹಲಿಗೆ ಕರೆದೊಯ್ದು ಸುನ್ನತ್ ಮಾಡಿಸಿದರು.
ಆದರೆ ದೇಶ/ಧರ್ಮಭಕ್ತರಾದ ಹಕ್ಕ ಬುಕ್ಕರು ದೆಹಲಿಯಿಂದ ತಪ್ಪಿಸಿಕೊಂಡು ಬರುತ್ತಾರೆ.
ಹಕ್ಕ ಬುಕ್ಕರು ತುಂಗಭದ್ರಾ ನದಿಯ ಸಮೀಪದಲ್ಲಿ ಹಾದುಹೋಗುತ್ತಿದ್ದಾಗ ಒಂದು ನರಿಯನ್ನು
ಮೊಲಗಳು ಬೆದರಿಸಿ ಓಡಿಸಿಕೊಂಡು ಹೋಗುತ್ತಿದ್ದ ದೃಶ್ಯ ನೋಡಿದರಂತೆ. ನಂತರ ಅಲ್ಲೊಬ್ಬ ಸಿಕ್ಕ ಸಂನ್ಯಾಸಿ
ಸಿಕ್ಕರಂತೆ . ಅವರಲ್ಲಿ ನಡೆದ ನರಿ ತೋಳದ ವಿಷಯ
ತಿಳಿಸಿದರಂತೆ. ಅವರೇ ವಿದ್ಯಾರಣ್ಯರು. ವಿದ್ಯಾರಣ್ಯರು ಆಗ ಇವರಿಬ್ಬರಿಗೂ ಈ ಸ್ಥಳದಲ್ಲಿ
ಸಾಮ್ರಾಜ್ಯದ ರಾಜಧಾನಿ ನಿರ್ಮಿಸಿದರೆ ಎಂಥಹ ಶಕ್ತಿಶಾಲಿ ಸೇನೆ ಧಾಳಿ ಮಾಡಿದರೂ ಎದುರಿಸಬಲ್ಲದು
ಎಂದು ನುಡಿದು ವಿಜಯನಗರ ಎಂಬ ಸಾಮ್ರಾಜ್ಯ ಸ್ಥಾಪಿಸಿರಿ ಎಂದು ಆದೇಶಿಸಿದರು. ಹಕ್ಕ ಬುಕ್ಕರಿಗೂ
ಬೃಹದಾಕರದ ದೇವಸ್ಥಾನಗಳುಳ್ಳ , ಭವ್ಯ ಅರಮನೆಗಳ ಮತ್ತು ವಿಶಾಲ ಕೋಟೆ ಕೋಟೆ ಕೊತ್ತಲಗಳುಳ್ಳ ಒಂದು
ಬೃಹತ್ ಸಾಮ್ರಾಜ್ಯ ಸ್ಥಾಪಿಸಬೇಕೆಂಬ ಮಹದಾಸೆಯಿತ್ತು. ಈ ಶುಭಾರಂಭಕ್ಕೆ ವಿದ್ಯಾರಣ್ಯರು ಘಳಿಗೆಯೂ
ನಿಗದಿಸಿದ್ದರಂತೆ. ಇತಿಹಾಸಕಾರರ ಪ್ರಕಾರ ಈ ದಿನ ಏಪ್ರಿಲ್ 18 ರಂದು ಸೂರ್ಯೋದಯದ ವೇಳೆಯಲ್ಲಿ
ವಿದ್ಯಾರಣ್ಯರು ವಿಜಯನಗರ ಸಮ್ರಾಜ್ಯದ ಸ್ಥಾಪನೆಗೆ ಶಂಖನಾದ ಮಾಡಿದರು.
ವಿಜಯನಗರದ ಮೊದಲ ರಾಜನಾಗಿದ್ದ ಹರಿಹರ(ಹಕ್ಕ) ಪ್ರಾರಂಭದಲ್ಲಿ ತುಂಗಭದ್ರಾ ನದಿ
ಕಣಿವೆಗಳ ಮೇಲೆ ಹಿಡಿತ ಸಾಧಿಸಿ ಹಂತ ಹಂತವಾಗಿ ಕೊಂಕಣ ಮತ್ತು ಮಲಬಾರ್ ಪ್ರಾಂತಗಳನ್ನು
ವಶಪಡಿಸಿಕೊಂಡ. ಅದೇ ಸಮಯದಲ್ಲಿ ಕ್ಷೀಣಿಸುತ್ತಿದ್ದ ಹೊಯ್ಸಳರ ದೊರೆ ವೀರ ಬಲ್ಲಾಳ (3) ಮಧುರೈ
ಸುಲ್ತಾನನೊಡನೆ ಸೆಣೆಸಿ ಅಸುನೀಗಿದ್ದ. ಇದರಿಂದ ಸಮಸ್ತ ಹೊಯ್ಸಳ ಪ್ರಾಂತಗಳನ್ನು ವಶಕ್ಕೆ
ತೆಗೆದುಕೊಂಡ. ಹಕ್ಕನು ತನ್ನ ಅವಧಿಯಲ್ಲಿ ದಕ್ಷಿಣ ಭಾರತದ ಪೂರ್ವದಿಂದ ಪಶ್ಚಿಮದವರೆಗೂ ಸಾಮ್ರಾಜ್ಯ
ವಿಸ್ತರಿಸಿದ.
ಅವನ ನಂತರ ಬುಕ್ಕರಾಯನು ದಕ್ಷಿಣ ಭಾರತದ ಅನೇಕ ಸಣ್ಣ ಸಣ್ಣ ಪ್ರಾಂತಗಳನ್ನು (ನ್ಯೂಣಿಜ್
ನ ದಾಖಲೆ ಅನುಸಾರವಾಗಿ) ತಕ್ಕೆಗೆ ತೆಗೆದುಕೊಂಡು ಒಂದುಗೂಡಿಸಿದ. ಆರ್ಕೊಟ್ ನ ಶಂಭುವರಾಯ ,
ಕೊಂಡವೀಡುವಿನ ರೆಡ್ಡಿಗಳನ್ನು ಮಣಿಸಿ ಪೀನುಕೊಂಡಾದ ಪ್ರಾಂತಗಳನ್ನು ವಿಜಯನಗರಕ್ಕೆ ಸೇರಿಸಿದ.
ಮಧುರೈ ಸುಲ್ತಾನನನ್ನೂ ಸೋಲಿಸಿ ರಾಮೇಶ್ವರಂ ತನಕ ವಿಸ್ತರಿಸಿದ. ಗಂಗಾಬಿಕೆಯ ‘ಮಧುರಾವಿಜಯಮ್’
ನಲ್ಲಿ ಉಲ್ಲೇಖವಿರುವುದೇನೆಂದರೆ 1374ರಷ್ಟರಲ್ಲಿ ಬಹ್ಮನಿ ಸುಲ್ತಾನರಮೇಲೂ ಮೇಲುಗೈ ಸಾಧಿಸಿ ಗೋವಾ
ಪ್ರಾಂತವನ್ನು ಮತ್ತು ಓಡಿಶಾ ರಾಜ್ಯಗಳನ್ನು ವಶ್ಪಡಿಸಿದ್ದಲ್ಲದೇ ಶ್ರೀಲಂಕಾದ ಜಾಫ್ನಾ ಮತ್ತು
ಕೇರಳದ ಜಾಮೋರಿನರನು ಕಪ್ಪಕಾಣಿಕೆ ಕೊಡುವಷ್ಟು ಸಾಮ್ರಾಜ್ಯ ಬಲಶಾಲಿಯಾಯಿತು.
ಹೀಗೆ ಘೋರ ಆಪತ್ತಿನ ಸಮಯದಲ್ಲಿ ಹಕ್ಕ ಬುಕ್ಕರು ಆಶಾಕಿರಣನಂತೆ ಉದಯಿಸಿ
ಹಿಂದೂಧರ್ಮವನ್ನು ರಕ್ಷಿಸಿದರು. ದಕ್ಷಿಣ ಭಾರತದಲ್ಲಿ ಕಲೆ, ಸಾಹಿತ್ಯ, ಸಂಗೀತ ವೈಭವಗಳ ಉಳಿವಿಗೆ
ಇವರಿಬ್ಬರೇ ಕಾರಣ.