ಶತಮಾನಗಳಿಂದ ಯಾರೂ ಕನಸಿನಲ್ಲೂ ಯೋಚಿಸದ್ದ ಸ್ವರಾಜ್ಯ ಶಿವಾಜಿ ಮಹಾರಾಜರು
ಸ್ಥಾಪಿಸಿ ಕೆಲವೇ ವರ್ಷಗಳಾಗಿದ್ದವಷ್ಟೇ . ಎದುರಿಸಿದ್ದ ಗಂಡಾಂತರಗಳು ಒಂದೋ ಎರಡೋ . ಅದೆಷ್ಟೋ
ವೀರಾಧಿವೀರರು ರಕ್ತ ಹರಿಸಿದ್ದರು . ಬೇಕಿದ್ದರೆ ಆದಿಲ್ ಷಾಹನ ಕೈಯಡಿ ಸೇನಾಧಿಕಾರಿಯಾಗಿದ್ದು
ವೈಭವೀಕೃತ ಜೀವನ ಶಿವಾಜಿಯವರಾಗಿರುತ್ತಿತ್ತು . ಆದರೆ ಸ್ವಾಭಿಮಾನೀ ದೇಶಭಕ್ತ ಶಿವಾಜಿ
ಬಾಲ್ಯದಿಂದಲೇ ಸ್ವರಾಜ್ಯ ಸ್ಥಾಪನೆಗೆ ಕಂಕಣಬದ್ಧರಾಗಿದ್ದು ಸದಾ ಕಂಟಕದ ಹಾದಿಯನ್ನೇ
ಸವೆಯುತ್ತಿದ್ದರು . ಪನ್ನಾಳಹಢದಿಂದ ವಿಶಾಲಗಢಕ್ಕೆ ಪರಾರಿಯಾಗಿದ್ದ ಆ ಕರಾಳ ರಾತ್ರಿಯಲ್ಲಿ
ಬಾಜಿಪ್ರಭುವಿನ ಬಲಿದಾನ . ಕೇವಲ ಮುನ್ನೂರು ಯೋಧರಿಂದ ಮೂರು ಸಾವಿರ ಮೊಘಲ್ ಯೋಧರನ್ನು ತಡೆದ
ನೆನಪು . ಸಿದ್ಧಿ ಜೌಹರ್ ಮತ್ತು ಅಫ್ಜಲ್ ಖಾನರನ್ನು ಎದುರಿಸಿದ್ದ ಎಲ್ಲಾ ಅಗಾಧ ಸನ್ನಿವೇಶಗಳು ಈಗ
ರಾಜಗಢದ ಕೋಟೆಯಲ್ಲಿ ಶತಪಥ ಹಾಕುತ್ತಾ ಹೆಜ್ಜೆಯೊಂದಿಗೆ ಹಾಗೇ ಸ್ಮೃತಿ ಪಟಲದಲ್ಲಿ
ಸುಳಿದಾಡುತ್ತಿದ್ದವು . ಮುಗಿದುಹೋದ ಘಟನಾವಳಿಗಳಾದವೋ ನೆನಪುಗಳಾದವು ಆದರೆ ಈಗ ವಾಸ್ತವದಲ್ಲಿ
ಮತ್ತೊಂದು ದೊಡ್ಡ ಗಂಡಾಂತರ ಎದುರು ಬಂದು ನಿಂತಿತ್ತು .
ಔರಂಗಾಜೇಬ ತನ್ನ ಸೋದರ ಮಾವನೇ ಆಗಿದ್ದ ನಿಪುಣ ಸೇನಾನಿ ಶಾಯಿಸ್ತೇ ಖಾನನನ್ನು ಒಂದು
ಲಕ್ಷ ಸೇನೆಯೊಂದಿಗೆ ಶಿವಾಜಿಯ ಸ್ವರಾಜ್ಯವನ್ನು ಸದೆಬಡಿಯಲು ಕಳಿಸಿದ್ದ. ಅವನೊಂದಿಗೆ ಜಸ್ವಂತ್
ಸಿಂಗ್ ಮತ್ತು ದಾವುದ್ ಖಾನ್ ರೆಂಬ ಸರದಾರರೂ ಇದ್ದರು . ಶಾಯಿಸ್ತೇ ಖಾನ್ ಬಂಗಾಲದ
ಸುಬೇದಾರನಾಗಿದ್ದ ಮತ್ತು ಬರುವಾಗ ದಾರಿಯುದ್ದಕ್ಕೂ ಹಾಹಾಕಾರ ಎಬ್ಬಿಸಿಕೊಂಡೇ ಬಂದಿದ್ದ . ಈಗ
ಶಿವಾಜಿಯ ಬಾಲ್ಯ ಕಾಲದ ವಾಸಸ್ತಾನವಾಗಿದ್ದ ಲಾಲ ಮಹಲಿನಲ್ಲಿ ತನ್ನ ಬೃಹತ್ ಸೇನೆಯೊಂದಿಗೆ ಬೀಡು
ಬಿಟ್ಟಿದ್ದ . ಈ ಕಂಟಕವನ್ನು ನಿವಾರಿಸುವುದು ಹೇಗೆ ಅನ್ನುವುದು ಶಿವಾಜಿ ಮಹಾರಾಜರಿಗೆ ದೊಡ್ಡ
ತಲೆನೋವಾಗಿತ್ತು . ದೊಡ್ಡ ಸೇನೆಯನ್ನು
ಎದುರಿಸುವುದು ಸಾಧ್ಯವಿಲ್ಲ , ಬದಲಾಗಿ ನೇರವಾಗಿ ಶಾಯಿಸ್ತೇ ಖಾನನ ಡೇರೆಯೊಳಗೇ ನುಗ್ಗಿ ಅವನ ರುಂಡ
ಹಾರಿಸುವುದೆಂದು ಯೋಜಿಸಿದರು .
ಗೂಢಚಾರರನ್ನು ಅಪಾಯಕ್ಕೆ ಒಡ್ಡಿ ಎಷ್ಟೋ ತಿಂಗಳುಗಳ ಮಾಹಿತಿಗಳನ್ನು ಪಡೆದು ಲಾಲ್
ಮಹಲಿನ ಮೇಲೆ ಹಲ್ಲೆ ಮಾಡಲು ಅದೇ ದಿನ ಯೋಜಿಸಿದ್ದರು . ಕತ್ತಿಹಿಡಿದು ತನ್ನ ದುರ್ಗದಿಂದ
ಕೆಳಗಿಳಿದು ಬಂದರು . ಆಗ ಸಂಧ್ಯಾ ಸೂರ್ಯ ಪ್ರಕಾಶಿಸುತ್ತಿದ್ದ . ಕತ್ತಿಯನ್ನು ಸೇವಕನಿಗೆ
ಒಪ್ಪಿಸಿ ಮಂಡಿಯೂರಿ ದೇವೀ ಪದ್ಮಾವತಿಗೆ ನಮಸ್ಕರಿಸಿದರು .
ಅಲ್ಲೇ ತಾಯಿ ಜೀಜಾಮಾತೆಯೂ ಇದ್ದರು . ಅವರ ಕಂಗಳಲ್ಲಿ ಮಗನ ಮೇಲೆ ಇದ್ದ ಕಾಳಜಿ
ಗೋಚರಿಸುತ್ತಿತ್ತು . ಈ ಕಾರ್ಯ ಎಲ್ಲಾದರೂ ವಿಫಲವಾದರೆ ಸರ್ವನಾಶ ನಿಃಶ್ಚಿತ . ಮಗ ತಾಯಿಯ
ಪಾದಪದ್ಮವನ್ನು ಸ್ಪರ್ಷಿಸಿ ಆಶೀರ್ವಾದ ಪಡೆದ . ಜೆಧೆ , ಚೀಮಾಜಿ ದೇಶಪಾಂಡೆ ಮತ್ತು ನೇತಾಜಿ
ಪಾಲಕರ್ ಎಲ್ಲಾ ಬಂದು ಸೇರಿದರು .
ಪದ್ಮಾವತಿ ಭದ್ರಕೋಟೆ ಎಂಬ ಹೆಸರಿನ ಈ ಸೇನಾ ತುಕಡಿ ಮಂದಿರದಿಂದ ಹೊರಬಂದಿತು .
ಮತ್ತು ಶ್ರೀಘ್ರದಲ್ಲೇ ಕತ್ತಲ ಮರೆಯಲ್ಲಿ ಕೋಟೆಯಿಂದಿಳಿದರು .
ನೆತಾಜಿ ಪಾಲಕರ್ – “ ಶಾಯಿಸ್ತೇ ಖಾನನ ಸೇನಾ ಬಿಡಾರ ಲಾಲ್ ಮಹಲಿನ ಸುತ್ತ ಬೀಡು
ಬಿಟ್ಟಿದೆ . ಅವನನ್ನು ಕೊಂದ ನಂತರ ಸಿಂಹಗಢಕ್ಕೆ ಪಲಾಯನ ಮಾಡಬೇಕು ” ಎಂದು ತನ್ನ ಸಿಪಾಯಿಗಳಿಗೆ
ನಿರ್ದೇಶಿಸಿದ . “ ಶಹಭಾಷ್ ನೇತಾಜಿ ” ಎಂದು ಶಿವಾಜಿ ಅಭಿನಂದಿಸಿದ . ಅಂದಹಾಗೆ ನೇತಾಜಿ ಶಿವಾಜಿಯ
ಬಲಗೈಯಲ್ಲವೇ . ಅವನ ಅಶ್ವದಳದ ಸಾಮರ್ಥ್ಯ ಅದ್ವಿತೀಯ . ಶಿವಾಜಿ ಕತ್ತಲೆಯ ಹಸಿರು ಹಬ್ಬಿದ ಪುಣೆಯ ಹಾದಿಯನ್ನು ಗಮನಿಸಿದರು . ಒಂದು ಲಕ್ಷ
ಮೊಘಲ್ ಸೇನೆಯೊಂದಿಗೆ ನೇರಾನೇರಾ ಸೆಣಸಾಡುವುದೆಂದರೆ ಆತ್ಮಹತ್ಯೆಯೇ ಸರಿ . ಅದಕ್ಕಾಗಿ ಅತ್ಯಂತ
ವಿಶ್ವಾಸನೀಯ ಸರದಾರರನ್ನು ಸೇರಿಸಿದ್ದ ಒಂದು ಸಣ್ಣ ಪಡೆಯೊಂದಿಗೆ ಅದರ ಹೃದಯಕ್ಕೇ ಆಘಾತ ನೀಡಿದರೆ
ಆ ಸಾಮ್ರಾಜ್ಯವನ್ನೇ ನಡುಗಿಸಿಬಿಡಬಹುದು ಎಂಬ ಯೋಚನೆ .
ದೂರದ ಲಾಲ ಮಹಲಿನಲ್ಲಿ ಆಗ ರಮಜಾನಿನ ರಾತ್ರಿ. ಗಢತ್ತಾಗಿ ಇಫ್ತಾರ ಭೋಜನ ಉಂಡು
ಶಾಯಿಸ್ತೇ ಖಾನ್ ಮತ್ತವನ ಎಲ್ಲ ಸಂಗಡಿಗರು ವಿಲಾಸಿಗರಂತೆ ಬಿದ್ದಿದ್ದರು . ದೊಡ್ಡ ದೊಡ್ಡ ಕೋಣೆಗಳ
ಮಧ್ಯೆ ಬೃಹತ್ ಪರದೆಗಳ ನೆಟ್ಟಿದ್ದ ಕಾರಣ ಆ ಕೋಣೆಗಳು ಸುಲಭವಾಗಿ ಗೋಚರಿಸುತ್ತಿರಲಿಲ್ಲ .
ಹೊರಗಡೆಯಿಂದ ಶಿವಾಜಿ , ಚೀಮಾಜಿ
ಮತ್ತು ಬಾಬಾಜಿ ಜೆಧೆ ಭೂತಗಳಂತೆ ಅರಮನೆಯನ್ನು ಸಮೀಪಿಸಿದರು . ಕತ್ತಲೆಯ ಮರೆಯ ರಾತ್ರಿ
ನಿಃಶ್ಯಬ್ಧತೆಯಲ್ಲಿ ಸದ್ದು ಮಾಡದೇ ಮುನ್ನಡೆಯುತ್ತಿದ್ದರು. ಕ್ರಿಮಿ ಕೀಟಗಳು ರವ ರವನೆ ಸದ್ದು
ಮಾಡುತ್ತಿದ್ದವು . ಮರಾಠಾ ಸರದಾರರು ಮತ್ತಿನ್ನು ಇಪ್ಪತ್ತು ಮಾವಳಿ ಯೋಧರು ಶಿವಾಜಿಯ
ಮುಂದಾಳತ್ವದಲ್ಲಿ ಅರಮನೆಯ ಹಿಂಬಾಗದಿಂದ ಪ್ರವೇಶಿಸಲು ತಗ್ಗಿ ಬಗ್ಗಿ ಮುಂದೆ ಸಾಗಿದರು . ಏಕೆಂದರೆ
ಆ ಹಿಂಭಾಗದಲ್ಲಿ ಹೆಚ್ಚು ಪಹರೆಯಿರುವುದಿಲ್ಲವೆಂದು ಮೊದಲೇ ಗೊತ್ತಿತ್ತು . ಅಲ್ಲಿ ಕೇವಲ ಒಬ್ಬ
ಪಹರೆ ಕಾಯಿತ್ತಿದ್ದ ಮತ್ತು ಅವನ ಗಸ್ತು
ತಿರುಗುವಿಕೆಯನ್ನು ಚೀಮಾಜಿ ಸೂಕ್ಷ್ಮವಾಗಿ ಗಮನಿಸುತ್ತಾ ಮುನ್ನೆಡೆಯಲು ಸೂಚನೆ ನೀಡಿತ್ತಿದ್ದ . ಆ
ಕಾವಲುಗಾರ ಕಿಟಕಿಯನ್ನು ಹಾದು ಹೋಗುತ್ತಿದ್ದಂತೆಯೇ ಚೀಮಾಜಿ ಸಿಪಾಯಿಗಳಿಗೆ ಸನ್ನೆ ಮಾಡಿದ .
ಎಲ್ಲರೂ ಚಕ್ಕನೆ ಮಹಡಿಯನ್ನು ಏರಿದರು . ಆಗ ಚೀಮಾಜಿ ಒಬ್ಬ ಸೈನಿಕನಿಗೆ ಥಟ್ಟನೆ ನಿಲ್ಲಲು
ಸೂಚಿಸಿದ . ಮತ್ತೊಂದು ಸುತ್ತಿನ ಗಸ್ತಿಗಾಗಿ ಬರುತ್ತಿದ್ದ ಪಹರೆದಾರನ ಮೇಲೆ ಚಂಗನೆ ಎರಗಿ ಅವನ
ಬಾಯಿಯನ್ನು ವಸ್ತ್ರದಿಂದ ಬಿಗಿದು ಚೂರಿಯಿಂದ ಅವನ್ ಕಂಠ ಸೀಳಿದ .
ಆಗ ಶಿವಾಜಿ – “ ಶಹಭಾಷ್ ಚೀಮಾಜಿ , ಈಗ ಗುಪ್ತಚರರು ಹೇಳಿದಂತೆ ಅಡುಗೆ ಕೋಣೆಯಿಂದ
ಒಳ ನುಗ್ಗೋಣ ”. ಶಿವಾಜಿ ಕಿಟಕಿಯಿಂದ
ಒಳಪ್ರವೇಶಿಸಲು ದಾರಿ ತೋರಿಸಿದರು . ಅಡುಗೆ ಕೋಣೆಯಲ್ಲೊಂದಿಷ್ಟು ಅಡುಗೆ ಭಟರು ಇಫ್ತಾರ್ ಭೋಜನದ
ನಂತರ ನಿದ್ದೆ ಹೊಡೆಯುತ್ತಿದ್ದರು . ಶಿವಾಜಿ ತನ್ನ ಹನ್ನೆರೆಡು ಯೋಧರಿಗೆ ತಣ್ಣನೆ ಆದೇಶಿಸಿದರು .
ಸದ್ದು ಮಾಡದೆ ಎಲ್ಲರನ್ನು ಚಿರನಿದ್ದೆ
ತಳ್ಳಲೆಂದು . ಎಲ್ಲರ ಗಂಟಲು ಸೀಳಿ ಅವರೆಲ್ಲರನ್ನು ರಕ್ತದ ಮಡುವಿನಲ್ಲಿ ಮಲಗಿಸಿದರು . ಒಂದು ಹಂತ ಮುಗಿಯಿತೆಂದು
ನಿಟ್ಟುಸಿರಿಟ್ಟರು . ಸನಿಹದಲ್ಲೇ ಶಾಯಿಸ್ತೇ ಖಾನನ ಜನಾನಾ ಪ್ರವೇಶಿಸುವ ಬಾಗಿಲು ತೋರುತ್ತಿತ್ತು
. ಸಿಪಾಯಿಗಳೊಡನೆ ಮುನ್ನಡೆದರು . ಆ ಬಾಗಿಲೇನೋ ಮುಚ್ಚಿತ್ತು . ಕೇವಲ ಒಂದು ಪಂಜಿನ ಮಂದ ಬೆಳಕು
ಆವರಿಸಿತ್ತು .
ಆದರೆ ಆ ಬಾಗಿಲನ್ನು ಇಟ್ಟಿಗೆ ಮತ್ತು ಮಣ್ಣಿನಿಂದ ಮುಚ್ಚಿದ್ದರು . ಒಡೆದು
ಮುಂದುವರೆಯುವುದೇನೂ ಕಷ್ಟವಲ್ಲ ಆದರೆ ಸದ್ದಾಗಿ ಯೋಜನೆ ವಿಫಲವಾಗುವುದೋ ಎನ್ನುವುದೊಂದೇ
ಎಚ್ಚರದಿಂದಿದ್ದರು . ಈಗ ಅತ್ಯಂತ ಜಾಗರೂಕತೆಯಿಂದ ಇಟ್ಟಿಗೆಗಳನ್ನು ತೆಗೆಯಲಾರಂಭಿಸಿದರು .
ಆ ಬದಿಯ ಪಹರೆಗಾರನಿಗೆ ಗೋಡೆಯಾಚೆ ಏನೋ ಶಬ್ದ ಕೇಳಿತು . ಆದರೆ ಏನೋ ಭ್ರಮೆ ಅಥವಾ
ಅಡುಗೆ ಮನೆ ಹೆಗ್ಗಣವಿರಬಹುದೆಂದು ಕಡೆಗಣಿಸಿದ . ಪಾಪ ! ಅವನಿಗೇನು ಗೊತ್ತಿತ್ತು ಅದು ಸಹ್ಯಾದ್ರಿ
ಬೆಟ್ಟದ ಹುಲಿಯೆಂದು .
ಆ ಮಂದ ಬೆಳಕಿನಲ್ಲಿ ಇಟ್ಟಿಗೆಯನ್ನು ಸರಿಸುತ್ತಾ ಸುಮಾರು ಮೂರಡಿಯ ಕಂಡಿ
ತೋಡಾಗಿತ್ತು . ಒಳಗಡೆಯ ಜನಾನಾಸ ಪರದೆಗಳು ತೋರುತ್ತಿದ್ದವು . ಅದತಕ್ಷಣ ಅದರೊಳಗೆ ಮುನ್ನಡೆದು
ಶಿವಾಜಿ ಒಂದು ಕಂಬದ ಹಿಂದೆ ಅವಿತು ನಿಂತರು . ಎಲ್ಲಿರಬಹುದು ಆ ಶಾಯಿಸ್ತೇ ಖಾನ್ ಎಂದು
ಎಣಿಸುತ್ತಿದ್ದರು .
ಆಗ ಕೊಂಚ ಹೆಜ್ಜೆ ಸಪ್ಪಳ ಕೇಳಿಬಂದು ಪಹರೆದಾರ “ ಹುಜೂರ್ ! ಹುಜೂರ್ .... ಯಾರೋ
ಒಳ ನುಗ್ಗಿದ್ದಾರೆ ” ಎಂದು ಬೊಬ್ಬೆ ಹಾಕಿದ .
ಖಾನನ ಸೈನಿಕರು ಕತ್ತಿಯನ್ನು ಒರೆಯಿಂದ ಬಿಚ್ಚಿ ಬರುತ್ತಿದ್ದಂತೆಯೇ ಮರಾಠಾ ಯೋಧರು ಒಬ್ಬೊಬ್ಬರಂತೆ
ಕಾವಲುಗಾರರನ್ನು ಕತ್ತರಿಸುತ್ತಿದ್ದರು . ಅವರ ಖಡ್ಗ ಪ್ರಹಾರಗಳು ನಿಖರವಾಗಿ ಖಾನನ ಸೈನಿಕರ ತಲೆ
ಬೀಳಿಸುತ್ತಿತ್ತು .
ಶಿವಾಜಿ ಮತ್ತವರ ಸರದಾರರು ಪರದೆಗಳನ್ನು ಹರಿಯುತ್ತಾ ಶಾಯಿಸ್ತೆ ಖಾನನಿಗೆ
ಅರಸುತ್ತಿದ್ದರು . ಅಷ್ಟರಲ್ಲಿ ಖಾನನ ಮಗನಾಗಿದ್ದ ಅಬ್ದುಲ್ ಫತೇಹ್ ಖಾನ್ ಒಂದಿಷ್ಟು ಯೋಧರೋಡನೆ
ಒಳಬಂದ . ಆ ದೈತ್ಯಾಕಾರದ ರಾಕ್ಷಸ ಎರಡೂ ಕೈಗಳಲ್ಲಿ ಕತ್ತಿಹಿಡಿದಿದ್ದ . ಅವನನ್ನು ಹೊಡೆಯಲು
ಮರಾಠಾ ಯೋಧರು ಮುನ್ನುಗ್ಗಿದರಾದರೂ ಅವನ ಮಾರಣಾಂತಿಕ ಹಲ್ಲೆಗೆ ಮೂವರು ಸತ್ತರು . ಆಗ ಆದ ಕೋಲಾಹಲದ
ಅವಕಾಶ ಪಡೆದು ಶಿವಾಜಿ ಅಬ್ದುಲನಿಂದ ತಪ್ಪಿಸಿಕೊಂಡು ಅವನ ಬಲಬದಿಯ ದ್ವಾರ ಪ್ರವೇಶಿಸಿದ .
ಹಿಂದಿನಿಂದ “ ಹರ ಹರ ಮಹಾದೇವ್ ” ಎಂದು ಘೋಷಣೆ ಕೂಗುತ್ತಾ ಜೆಧೆ ನಿರ್ದಯವಾಗಿ ಶತ್ರು ಸೇನೆಯನ್ನು
ಕತ್ತರಿಸುತ್ತಿದ್ದ . ಮತ್ತೊಬ್ಬ ಮರಾಠಾ ಯೋಧ ಅಬ್ದುಲನ ಎದೆಗೆ ಕತ್ತಿಯನ್ನು ಇರಿದ . ಅಬ್ದುಲ್
ಫತೇಹ್ ಖಾನ್ ಕುಸಿದು ಬಿದ್ದ .
ಈಗ ಶಿವಾಜಿ ಶಾಯಿಸ್ತೇ ಖಾನನ ಮೇಲೆ ದೃಷ್ಟಿಯಿತ್ತರು . ಅವನ ಬೊಕ್ಕ ತಲೆ ಮತ್ತು
ಕುರೂಪಿ ಕಂಗಳು ಮಂದಬೆಳಕಿನ ರೇಖಾಚಿತ್ರದಲ್ಲಿ ಇನ್ನೂ ವಿಕಾರವಾಗಿ ತೋರಿತು . ಗಡಿಬಿಡಿಯಲ್ಲಿ
ನಿದ್ದೆಯಿಂದೆದ್ದ ಖಾನನಿಗೆ ಕತ್ತಲೆಯ ಮರೆಯಲ್ಲಿ ಅಷ್ಟೇನೂ ತೋರುತ್ತಿರಲಿಲ್ಲ . ಶಿವಾಜಿಯ ಕತ್ತಿಯ
ಹೊಳಪು ಮತ್ತಿನ್ನೊಂದಿಷ್ಟು ಜನ ಅವನ ಹಿಂದಿದ್ದಾರೆಂದು ಸ್ವಲ್ಪ ಕಂಡ . ಆಗ ಖಾನನ ಬೇಗಮ್ ಒಬ್ಬಳು ಗಾಬರಿಯಿಂದ
ದೀಪವನ್ನು ಬೀಳಿಸಿದಳು . ಮತ್ತೆ ಕಗ್ಗತ್ತಲು .
ಕತ್ತಲಿನ ಅವಕಾಶ ಪಡೆದ ಖಾನ ತಕ್ಷಣ ಸಮೀಪದ ಕಿಟಕಿಗೆ ಹಾರಿದ . ಅದರಲ್ಲೂ ಖಾನನ
ಚಲನೆಯನ್ನು ಕಂಡ ಶಿವಾಜಿ ಅವನ ಮೇಲೆ ಚಿರತೆಯಂತೆ ಎರಗಿ ಕತ್ತಿ ಬೀಸಿದರು . ಖಾನನ ಕೈಯಿಯ ಮೂರು ಬೆರಳುಗಳು
ಕತ್ತರಿಸಿತ್ತು . ಅವನು ನೆಲಕ್ಕೆ ಬಿದ್ದ .
ಶಿವಾಜಿ ಕೆಳಗೆ ಬಿದ್ದ ಖಾನನನ್ನು ನೋಡಿ . ಬಂದ ಕೆಲಸ ಫಲಿಸಿತು ಎಂದು ಭಾವಿಸಿದರು
.
No comments:
Post a Comment