Sunday 24 July 2016

ಶಿವಾಜಿ ಮಹಾರಾಜರ ಕಮ್ಯಾಂಡೋ ಆಪರೇಷನ್





ಶತಮಾನಗಳಿಂದ ಯಾರೂ ಕನಸಿನಲ್ಲೂ ಯೋಚಿಸದ್ದ ಸ್ವರಾಜ್ಯ ಶಿವಾಜಿ ಮಹಾರಾಜರು ಸ್ಥಾಪಿಸಿ ಕೆಲವೇ ವರ್ಷಗಳಾಗಿದ್ದವಷ್ಟೇ . ಎದುರಿಸಿದ್ದ ಗಂಡಾಂತರಗಳು ಒಂದೋ ಎರಡೋ . ಅದೆಷ್ಟೋ ವೀರಾಧಿವೀರರು ರಕ್ತ ಹರಿಸಿದ್ದರು . ಬೇಕಿದ್ದರೆ ಆದಿಲ್ ಷಾಹನ ಕೈಯಡಿ ಸೇನಾಧಿಕಾರಿಯಾಗಿದ್ದು ವೈಭವೀಕೃತ ಜೀವನ ಶಿವಾಜಿಯವರಾಗಿರುತ್ತಿತ್ತು . ಆದರೆ ಸ್ವಾಭಿಮಾನೀ ದೇಶಭಕ್ತ ಶಿವಾಜಿ ಬಾಲ್ಯದಿಂದಲೇ ಸ್ವರಾಜ್ಯ ಸ್ಥಾಪನೆಗೆ ಕಂಕಣಬದ್ಧರಾಗಿದ್ದು ಸದಾ ಕಂಟಕದ ಹಾದಿಯನ್ನೇ ಸವೆಯುತ್ತಿದ್ದರು . ಪನ್ನಾಳಹಢದಿಂದ ವಿಶಾಲಗಢಕ್ಕೆ ಪರಾರಿಯಾಗಿದ್ದ ಆ ಕರಾಳ ರಾತ್ರಿಯಲ್ಲಿ ಬಾಜಿಪ್ರಭುವಿನ ಬಲಿದಾನ . ಕೇವಲ ಮುನ್ನೂರು ಯೋಧರಿಂದ ಮೂರು ಸಾವಿರ ಮೊಘಲ್ ಯೋಧರನ್ನು ತಡೆದ ನೆನಪು . ಸಿದ್ಧಿ ಜೌಹರ್ ಮತ್ತು ಅಫ್ಜಲ್ ಖಾನರನ್ನು ಎದುರಿಸಿದ್ದ ಎಲ್ಲಾ ಅಗಾಧ ಸನ್ನಿವೇಶಗಳು ಈಗ ರಾಜಗಢದ ಕೋಟೆಯಲ್ಲಿ ಶತಪಥ ಹಾಕುತ್ತಾ ಹೆಜ್ಜೆಯೊಂದಿಗೆ ಹಾಗೇ ಸ್ಮೃತಿ ಪಟಲದಲ್ಲಿ ಸುಳಿದಾಡುತ್ತಿದ್ದವು . ಮುಗಿದುಹೋದ ಘಟನಾವಳಿಗಳಾದವೋ ನೆನಪುಗಳಾದವು ಆದರೆ ಈಗ ವಾಸ್ತವದಲ್ಲಿ ಮತ್ತೊಂದು ದೊಡ್ಡ ಗಂಡಾಂತರ ಎದುರು ಬಂದು ನಿಂತಿತ್ತು .
ಔರಂಗಾಜೇಬ ತನ್ನ ಸೋದರ ಮಾವನೇ ಆಗಿದ್ದ ನಿಪುಣ ಸೇನಾನಿ ಶಾಯಿಸ್ತೇ ಖಾನನನ್ನು ಒಂದು ಲಕ್ಷ ಸೇನೆಯೊಂದಿಗೆ ಶಿವಾಜಿಯ ಸ್ವರಾಜ್ಯವನ್ನು ಸದೆಬಡಿಯಲು ಕಳಿಸಿದ್ದ. ಅವನೊಂದಿಗೆ ಜಸ್ವಂತ್ ಸಿಂಗ್ ಮತ್ತು ದಾವುದ್ ಖಾನ್ ರೆಂಬ ಸರದಾರರೂ ಇದ್ದರು . ಶಾಯಿಸ್ತೇ ಖಾನ್ ಬಂಗಾಲದ ಸುಬೇದಾರನಾಗಿದ್ದ ಮತ್ತು ಬರುವಾಗ ದಾರಿಯುದ್ದಕ್ಕೂ ಹಾಹಾಕಾರ ಎಬ್ಬಿಸಿಕೊಂಡೇ ಬಂದಿದ್ದ . ಈಗ ಶಿವಾಜಿಯ ಬಾಲ್ಯ ಕಾಲದ ವಾಸಸ್ತಾನವಾಗಿದ್ದ ಲಾಲ ಮಹಲಿನಲ್ಲಿ ತನ್ನ ಬೃಹತ್ ಸೇನೆಯೊಂದಿಗೆ ಬೀಡು ಬಿಟ್ಟಿದ್ದ . ಈ ಕಂಟಕವನ್ನು ನಿವಾರಿಸುವುದು ಹೇಗೆ ಅನ್ನುವುದು ಶಿವಾಜಿ ಮಹಾರಾಜರಿಗೆ ದೊಡ್ಡ ತಲೆನೋವಾಗಿತ್ತು .  ದೊಡ್ಡ ಸೇನೆಯನ್ನು ಎದುರಿಸುವುದು ಸಾಧ್ಯವಿಲ್ಲ , ಬದಲಾಗಿ ನೇರವಾಗಿ ಶಾಯಿಸ್ತೇ ಖಾನನ ಡೇರೆಯೊಳಗೇ ನುಗ್ಗಿ ಅವನ ರುಂಡ ಹಾರಿಸುವುದೆಂದು ಯೋಜಿಸಿದರು .
ಗೂಢಚಾರರನ್ನು ಅಪಾಯಕ್ಕೆ ಒಡ್ಡಿ ಎಷ್ಟೋ ತಿಂಗಳುಗಳ ಮಾಹಿತಿಗಳನ್ನು ಪಡೆದು ಲಾಲ್ ಮಹಲಿನ ಮೇಲೆ ಹಲ್ಲೆ ಮಾಡಲು ಅದೇ ದಿನ ಯೋಜಿಸಿದ್ದರು . ಕತ್ತಿಹಿಡಿದು ತನ್ನ ದುರ್ಗದಿಂದ ಕೆಳಗಿಳಿದು ಬಂದರು . ಆಗ ಸಂಧ್ಯಾ ಸೂರ್ಯ ಪ್ರಕಾಶಿಸುತ್ತಿದ್ದ . ಕತ್ತಿಯನ್ನು ಸೇವಕನಿಗೆ ಒಪ್ಪಿಸಿ ಮಂಡಿಯೂರಿ ದೇವೀ ಪದ್ಮಾವತಿಗೆ ನಮಸ್ಕರಿಸಿದರು .
ಅಲ್ಲೇ ತಾಯಿ ಜೀಜಾಮಾತೆಯೂ ಇದ್ದರು . ಅವರ ಕಂಗಳಲ್ಲಿ ಮಗನ ಮೇಲೆ ಇದ್ದ ಕಾಳಜಿ ಗೋಚರಿಸುತ್ತಿತ್ತು . ಈ ಕಾರ್ಯ ಎಲ್ಲಾದರೂ ವಿಫಲವಾದರೆ ಸರ್ವನಾಶ ನಿಃಶ್ಚಿತ . ಮಗ ತಾಯಿಯ ಪಾದಪದ್ಮವನ್ನು ಸ್ಪರ್ಷಿಸಿ ಆಶೀರ್ವಾದ ಪಡೆದ . ಜೆಧೆ , ಚೀಮಾಜಿ ದೇಶಪಾಂಡೆ ಮತ್ತು ನೇತಾಜಿ ಪಾಲಕರ್ ಎಲ್ಲಾ ಬಂದು ಸೇರಿದರು .
ಪದ್ಮಾವತಿ ಭದ್ರಕೋಟೆ ಎಂಬ ಹೆಸರಿನ ಈ ಸೇನಾ ತುಕಡಿ ಮಂದಿರದಿಂದ ಹೊರಬಂದಿತು . ಮತ್ತು ಶ್ರೀಘ್ರದಲ್ಲೇ ಕತ್ತಲ ಮರೆಯಲ್ಲಿ ಕೋಟೆಯಿಂದಿಳಿದರು .


ನೆತಾಜಿ ಪಾಲಕರ್ – “ ಶಾಯಿಸ್ತೇ ಖಾನನ ಸೇನಾ ಬಿಡಾರ ಲಾಲ್ ಮಹಲಿನ ಸುತ್ತ ಬೀಡು ಬಿಟ್ಟಿದೆ . ಅವನನ್ನು ಕೊಂದ ನಂತರ ಸಿಂಹಗಢಕ್ಕೆ ಪಲಾಯನ ಮಾಡಬೇಕು ” ಎಂದು ತನ್ನ ಸಿಪಾಯಿಗಳಿಗೆ ನಿರ್ದೇಶಿಸಿದ . “ ಶಹಭಾಷ್ ನೇತಾಜಿ ” ಎಂದು ಶಿವಾಜಿ ಅಭಿನಂದಿಸಿದ . ಅಂದಹಾಗೆ ನೇತಾಜಿ ಶಿವಾಜಿಯ ಬಲಗೈಯಲ್ಲವೇ . ಅವನ ಅಶ್ವದಳದ ಸಾಮರ್ಥ್ಯ ಅದ್ವಿತೀಯ . ಶಿವಾಜಿ ಕತ್ತಲೆಯ ಹಸಿರು  ಹಬ್ಬಿದ ಪುಣೆಯ ಹಾದಿಯನ್ನು ಗಮನಿಸಿದರು . ಒಂದು ಲಕ್ಷ ಮೊಘಲ್ ಸೇನೆಯೊಂದಿಗೆ ನೇರಾನೇರಾ ಸೆಣಸಾಡುವುದೆಂದರೆ ಆತ್ಮಹತ್ಯೆಯೇ ಸರಿ . ಅದಕ್ಕಾಗಿ ಅತ್ಯಂತ ವಿಶ್ವಾಸನೀಯ ಸರದಾರರನ್ನು ಸೇರಿಸಿದ್ದ ಒಂದು ಸಣ್ಣ ಪಡೆಯೊಂದಿಗೆ ಅದರ ಹೃದಯಕ್ಕೇ ಆಘಾತ ನೀಡಿದರೆ ಆ ಸಾಮ್ರಾಜ್ಯವನ್ನೇ ನಡುಗಿಸಿಬಿಡಬಹುದು ಎಂಬ ಯೋಚನೆ .

ದೂರದ ಲಾಲ ಮಹಲಿನಲ್ಲಿ ಆಗ ರಮಜಾನಿನ ರಾತ್ರಿ. ಗಢತ್ತಾಗಿ ಇಫ್ತಾರ ಭೋಜನ ಉಂಡು ಶಾಯಿಸ್ತೇ ಖಾನ್ ಮತ್ತವನ ಎಲ್ಲ ಸಂಗಡಿಗರು ವಿಲಾಸಿಗರಂತೆ ಬಿದ್ದಿದ್ದರು . ದೊಡ್ಡ ದೊಡ್ಡ ಕೋಣೆಗಳ ಮಧ್ಯೆ ಬೃಹತ್ ಪರದೆಗಳ ನೆಟ್ಟಿದ್ದ ಕಾರಣ ಆ ಕೋಣೆಗಳು ಸುಲಭವಾಗಿ ಗೋಚರಿಸುತ್ತಿರಲಿಲ್ಲ .

ಹೊರಗಡೆಯಿಂದ  ಶಿವಾಜಿ , ಚೀಮಾಜಿ ಮತ್ತು ಬಾಬಾಜಿ ಜೆಧೆ ಭೂತಗಳಂತೆ ಅರಮನೆಯನ್ನು ಸಮೀಪಿಸಿದರು . ಕತ್ತಲೆಯ ಮರೆಯ ರಾತ್ರಿ ನಿಃಶ್ಯಬ್ಧತೆಯಲ್ಲಿ ಸದ್ದು ಮಾಡದೇ ಮುನ್ನಡೆಯುತ್ತಿದ್ದರು. ಕ್ರಿಮಿ ಕೀಟಗಳು ರವ ರವನೆ ಸದ್ದು ಮಾಡುತ್ತಿದ್ದವು . ಮರಾಠಾ ಸರದಾರರು ಮತ್ತಿನ್ನು ಇಪ್ಪತ್ತು ಮಾವಳಿ ಯೋಧರು ಶಿವಾಜಿಯ ಮುಂದಾಳತ್ವದಲ್ಲಿ ಅರಮನೆಯ ಹಿಂಬಾಗದಿಂದ ಪ್ರವೇಶಿಸಲು ತಗ್ಗಿ ಬಗ್ಗಿ ಮುಂದೆ ಸಾಗಿದರು . ಏಕೆಂದರೆ ಆ ಹಿಂಭಾಗದಲ್ಲಿ ಹೆಚ್ಚು ಪಹರೆಯಿರುವುದಿಲ್ಲವೆಂದು ಮೊದಲೇ ಗೊತ್ತಿತ್ತು . ಅಲ್ಲಿ ಕೇವಲ ಒಬ್ಬ ಪಹರೆ ಕಾಯಿತ್ತಿದ್ದ  ಮತ್ತು ಅವನ ಗಸ್ತು ತಿರುಗುವಿಕೆಯನ್ನು ಚೀಮಾಜಿ ಸೂಕ್ಷ್ಮವಾಗಿ ಗಮನಿಸುತ್ತಾ ಮುನ್ನೆಡೆಯಲು ಸೂಚನೆ ನೀಡಿತ್ತಿದ್ದ . ಆ ಕಾವಲುಗಾರ ಕಿಟಕಿಯನ್ನು ಹಾದು ಹೋಗುತ್ತಿದ್ದಂತೆಯೇ ಚೀಮಾಜಿ ಸಿಪಾಯಿಗಳಿಗೆ ಸನ್ನೆ ಮಾಡಿದ . ಎಲ್ಲರೂ ಚಕ್ಕನೆ ಮಹಡಿಯನ್ನು ಏರಿದರು . ಆಗ ಚೀಮಾಜಿ ಒಬ್ಬ ಸೈನಿಕನಿಗೆ ಥಟ್ಟನೆ ನಿಲ್ಲಲು ಸೂಚಿಸಿದ . ಮತ್ತೊಂದು ಸುತ್ತಿನ ಗಸ್ತಿಗಾಗಿ ಬರುತ್ತಿದ್ದ ಪಹರೆದಾರನ ಮೇಲೆ ಚಂಗನೆ ಎರಗಿ ಅವನ ಬಾಯಿಯನ್ನು ವಸ್ತ್ರದಿಂದ ಬಿಗಿದು ಚೂರಿಯಿಂದ ಅವನ್ ಕಂಠ ಸೀಳಿದ .

ಆಗ ಶಿವಾಜಿ – “ ಶಹಭಾಷ್ ಚೀಮಾಜಿ , ಈಗ ಗುಪ್ತಚರರು ಹೇಳಿದಂತೆ ಅಡುಗೆ ಕೋಣೆಯಿಂದ ಒಳ ನುಗ್ಗೋಣ  ”. ಶಿವಾಜಿ ಕಿಟಕಿಯಿಂದ ಒಳಪ್ರವೇಶಿಸಲು ದಾರಿ ತೋರಿಸಿದರು . ಅಡುಗೆ ಕೋಣೆಯಲ್ಲೊಂದಿಷ್ಟು ಅಡುಗೆ ಭಟರು ಇಫ್ತಾರ್ ಭೋಜನದ ನಂತರ ನಿದ್ದೆ ಹೊಡೆಯುತ್ತಿದ್ದರು . ಶಿವಾಜಿ ತನ್ನ ಹನ್ನೆರೆಡು ಯೋಧರಿಗೆ ತಣ್ಣನೆ ಆದೇಶಿಸಿದರು . ಸದ್ದು ಮಾಡದೆ ಎಲ್ಲರನ್ನು  ಚಿರನಿದ್ದೆ ತಳ್ಳಲೆಂದು . ಎಲ್ಲರ ಗಂಟಲು ಸೀಳಿ ಅವರೆಲ್ಲರನ್ನು ರಕ್ತದ ಮಡುವಿನಲ್ಲಿ  ಮಲಗಿಸಿದರು . ಒಂದು ಹಂತ ಮುಗಿಯಿತೆಂದು ನಿಟ್ಟುಸಿರಿಟ್ಟರು . ಸನಿಹದಲ್ಲೇ ಶಾಯಿಸ್ತೇ ಖಾನನ ಜನಾನಾ ಪ್ರವೇಶಿಸುವ ಬಾಗಿಲು ತೋರುತ್ತಿತ್ತು . ಸಿಪಾಯಿಗಳೊಡನೆ ಮುನ್ನಡೆದರು . ಆ ಬಾಗಿಲೇನೋ ಮುಚ್ಚಿತ್ತು . ಕೇವಲ ಒಂದು ಪಂಜಿನ ಮಂದ ಬೆಳಕು ಆವರಿಸಿತ್ತು .
ಆದರೆ ಆ ಬಾಗಿಲನ್ನು ಇಟ್ಟಿಗೆ ಮತ್ತು ಮಣ್ಣಿನಿಂದ ಮುಚ್ಚಿದ್ದರು . ಒಡೆದು ಮುಂದುವರೆಯುವುದೇನೂ ಕಷ್ಟವಲ್ಲ ಆದರೆ ಸದ್ದಾಗಿ ಯೋಜನೆ ವಿಫಲವಾಗುವುದೋ ಎನ್ನುವುದೊಂದೇ ಎಚ್ಚರದಿಂದಿದ್ದರು . ಈಗ ಅತ್ಯಂತ ಜಾಗರೂಕತೆಯಿಂದ ಇಟ್ಟಿಗೆಗಳನ್ನು ತೆಗೆಯಲಾರಂಭಿಸಿದರು .
ಆ ಬದಿಯ ಪಹರೆಗಾರನಿಗೆ ಗೋಡೆಯಾಚೆ ಏನೋ ಶಬ್ದ ಕೇಳಿತು . ಆದರೆ ಏನೋ ಭ್ರಮೆ ಅಥವಾ ಅಡುಗೆ ಮನೆ ಹೆಗ್ಗಣವಿರಬಹುದೆಂದು ಕಡೆಗಣಿಸಿದ . ಪಾಪ ! ಅವನಿಗೇನು ಗೊತ್ತಿತ್ತು ಅದು ಸಹ್ಯಾದ್ರಿ ಬೆಟ್ಟದ ಹುಲಿಯೆಂದು .

ಆ ಮಂದ ಬೆಳಕಿನಲ್ಲಿ ಇಟ್ಟಿಗೆಯನ್ನು ಸರಿಸುತ್ತಾ ಸುಮಾರು ಮೂರಡಿಯ ಕಂಡಿ ತೋಡಾಗಿತ್ತು . ಒಳಗಡೆಯ ಜನಾನಾಸ ಪರದೆಗಳು ತೋರುತ್ತಿದ್ದವು . ಅದತಕ್ಷಣ ಅದರೊಳಗೆ ಮುನ್ನಡೆದು ಶಿವಾಜಿ ಒಂದು ಕಂಬದ ಹಿಂದೆ ಅವಿತು ನಿಂತರು . ಎಲ್ಲಿರಬಹುದು ಆ ಶಾಯಿಸ್ತೇ ಖಾನ್ ಎಂದು ಎಣಿಸುತ್ತಿದ್ದರು .
ಆಗ ಕೊಂಚ ಹೆಜ್ಜೆ ಸಪ್ಪಳ ಕೇಳಿಬಂದು ಪಹರೆದಾರ “ ಹುಜೂರ್ ! ಹುಜೂರ್ .... ಯಾರೋ ಒಳ ನುಗ್ಗಿದ್ದಾರೆ  ” ಎಂದು ಬೊಬ್ಬೆ ಹಾಕಿದ . ಖಾನನ ಸೈನಿಕರು ಕತ್ತಿಯನ್ನು ಒರೆಯಿಂದ ಬಿಚ್ಚಿ ಬರುತ್ತಿದ್ದಂತೆಯೇ ಮರಾಠಾ ಯೋಧರು ಒಬ್ಬೊಬ್ಬರಂತೆ ಕಾವಲುಗಾರರನ್ನು ಕತ್ತರಿಸುತ್ತಿದ್ದರು . ಅವರ ಖಡ್ಗ ಪ್ರಹಾರಗಳು ನಿಖರವಾಗಿ ಖಾನನ ಸೈನಿಕರ ತಲೆ ಬೀಳಿಸುತ್ತಿತ್ತು .
ಶಿವಾಜಿ ಮತ್ತವರ ಸರದಾರರು ಪರದೆಗಳನ್ನು ಹರಿಯುತ್ತಾ ಶಾಯಿಸ್ತೆ ಖಾನನಿಗೆ ಅರಸುತ್ತಿದ್ದರು . ಅಷ್ಟರಲ್ಲಿ ಖಾನನ ಮಗನಾಗಿದ್ದ ಅಬ್ದುಲ್ ಫತೇಹ್ ಖಾನ್ ಒಂದಿಷ್ಟು ಯೋಧರೋಡನೆ ಒಳಬಂದ . ಆ ದೈತ್ಯಾಕಾರದ ರಾಕ್ಷಸ ಎರಡೂ ಕೈಗಳಲ್ಲಿ ಕತ್ತಿಹಿಡಿದಿದ್ದ . ಅವನನ್ನು ಹೊಡೆಯಲು ಮರಾಠಾ ಯೋಧರು ಮುನ್ನುಗ್ಗಿದರಾದರೂ ಅವನ ಮಾರಣಾಂತಿಕ ಹಲ್ಲೆಗೆ ಮೂವರು ಸತ್ತರು . ಆಗ ಆದ ಕೋಲಾಹಲದ ಅವಕಾಶ ಪಡೆದು ಶಿವಾಜಿ ಅಬ್ದುಲನಿಂದ ತಪ್ಪಿಸಿಕೊಂಡು ಅವನ ಬಲಬದಿಯ ದ್ವಾರ ಪ್ರವೇಶಿಸಿದ . ಹಿಂದಿನಿಂದ “ ಹರ ಹರ ಮಹಾದೇವ್ ” ಎಂದು ಘೋಷಣೆ ಕೂಗುತ್ತಾ ಜೆಧೆ ನಿರ್ದಯವಾಗಿ ಶತ್ರು ಸೇನೆಯನ್ನು ಕತ್ತರಿಸುತ್ತಿದ್ದ . ಮತ್ತೊಬ್ಬ ಮರಾಠಾ ಯೋಧ ಅಬ್ದುಲನ ಎದೆಗೆ ಕತ್ತಿಯನ್ನು ಇರಿದ . ಅಬ್ದುಲ್ ಫತೇಹ್ ಖಾನ್ ಕುಸಿದು ಬಿದ್ದ .
ಈಗ ಶಿವಾಜಿ ಶಾಯಿಸ್ತೇ ಖಾನನ ಮೇಲೆ ದೃಷ್ಟಿಯಿತ್ತರು . ಅವನ ಬೊಕ್ಕ ತಲೆ ಮತ್ತು ಕುರೂಪಿ ಕಂಗಳು ಮಂದಬೆಳಕಿನ ರೇಖಾಚಿತ್ರದಲ್ಲಿ ಇನ್ನೂ ವಿಕಾರವಾಗಿ ತೋರಿತು . ಗಡಿಬಿಡಿಯಲ್ಲಿ ನಿದ್ದೆಯಿಂದೆದ್ದ ಖಾನನಿಗೆ ಕತ್ತಲೆಯ ಮರೆಯಲ್ಲಿ ಅಷ್ಟೇನೂ ತೋರುತ್ತಿರಲಿಲ್ಲ . ಶಿವಾಜಿಯ ಕತ್ತಿಯ ಹೊಳಪು ಮತ್ತಿನ್ನೊಂದಿಷ್ಟು ಜನ ಅವನ ಹಿಂದಿದ್ದಾರೆಂದು ಸ್ವಲ್ಪ ಕಂಡ . ಆಗ ಖಾನನ ಬೇಗಮ್ ಒಬ್ಬಳು ಗಾಬರಿಯಿಂದ ದೀಪವನ್ನು ಬೀಳಿಸಿದಳು . ಮತ್ತೆ ಕಗ್ಗತ್ತಲು .
ಕತ್ತಲಿನ ಅವಕಾಶ ಪಡೆದ ಖಾನ ತಕ್ಷಣ ಸಮೀಪದ ಕಿಟಕಿಗೆ ಹಾರಿದ . ಅದರಲ್ಲೂ ಖಾನನ ಚಲನೆಯನ್ನು ಕಂಡ ಶಿವಾಜಿ ಅವನ ಮೇಲೆ ಚಿರತೆಯಂತೆ ಎರಗಿ ಕತ್ತಿ ಬೀಸಿದರು . ಖಾನನ ಕೈಯಿಯ ಮೂರು ಬೆರಳುಗಳು ಕತ್ತರಿಸಿತ್ತು . ಅವನು ನೆಲಕ್ಕೆ ಬಿದ್ದ . 

ಶಿವಾಜಿ ಕೆಳಗೆ ಬಿದ್ದ ಖಾನನನ್ನು ನೋಡಿ . ಬಂದ ಕೆಲಸ ಫಲಿಸಿತು ಎಂದು ಭಾವಿಸಿದರು .  
 





No comments:

Post a Comment