ಅದು 1720 ರ ಸಮಯ. ಮೊಘಲರ ಆಡಳಿತ ಕೊನೆಗೊಳ್ಳುತ್ತ ಮರಾಠರ ಪ್ರಾಬಲ್ಯ ದಕ್ಷಿಣ
ಭಾರತದತ್ತ ಹರಡುತ್ತಿದ್ದ ಸಮಯ. ಮರಾಠರು ನಿಜಾಮರ ಮೇಲೆ ಪ್ರಾಭಲ್ಯ ಸಾಧಿಸಿ ಖಂಡೇಶ್ , ಬಿರಾರ್ ,
ಔರಂಗಾಬಾದ್ , ಬೀದರ್ , ಬಿಜಾಪುರ ಮತ್ತು ಹೈದರಾಬಾದ್ ಪ್ರಾಂತಗಳಲ್ಲಿ ಆಡಳಿತ ಸಾಧಿಸಿ ಕಂದಾಯ
ಪಡೆಯಲಾರಂಭಿಸಿದ್ದರು . ಆದರೆ ನಂತರ ಬಂದ ನಿಜಾಮ್ ಉಲ್ ಮುಲ್ಕನಿಗೆ ಮರಾಠಾ ಛತ್ರಪತಿ ಶಾಹುವಿನ
ಆಡಳಿತ ವಿರೋಧಿಸಿ ತನ್ನನ್ನು ಸ್ವತಂತ್ರಗೊಳಿಸಿಕೊಂಡು ಸಂಪೂರ್ಣ ಡಕ್ಕನ್ ಗೆ ತಾನೇ ರಾಜನೆಂದು
ಘೋಷಿಸಿಕೊಂಡಿದ್ದಲ್ಲದೆ ಮರಾಠರನ್ನು ಸೋಲಿಸುವೆನೆಂದು ದುಃಸ್ಸಾಹಸಕೆ ಕೈ ಹಾಕಿದ .
ಆಗ ಏಳು ವರ್ಷಗಳು ಕಳೆದು 1727 ರ ಸಮಯ . ಬಾಜಿರಾಯ (I) ಫತೇಹಸಿಂಗ್ ಭೋಸ್ಲೆ ಸೇನಾಧಿಪತ್ಯದಲ್ಲಿ
ತಿರುಚಿರಾಪಳ್ಳಿ ಮತ್ತು ಶ್ರೀರಂಗಪಟ್ಟಣದ ದಂಡಯಾತ್ರೆಯಲ್ಲಿದ್ದ . ಆಗ ಉತ್ತರದಲ್ಲಿ ನಿಜಾಮನ
ಅಧಿಕಾರಿ ಐವಜ್ ಖಾನ ಪುಣೆಯ ಮೇಲೆ ಧಾಳಿ ನಡೆಸಿದ್ದ , ತರ್ಟಜ್ ಖಾನ್ ನಾಸಿಕ್ ಮತ್ತು ಸಂಗಮ್ನರ್
ಮೇಲೆ ಹಾಗೆಯೇ ರಾಂಬಾಜಿ ನಿಂಬಾಳ್ಕರ್ ಸತಾರದ ಮೇಲೆ ದಂಡೆತ್ತಿದ್ದರು . ಶಾಹು ಮಹಾರಾಜ
ಪುರಂದರಗಢಕ್ಕೆ ಹಿಮ್ಮೆಟ್ಟಿ ಬಾಜಿರಾಯನಿಗೆ ಕರ್ಣಾಟಕದಿಂದ ಮರಳಲು ಆದೇಶಿಸುತ್ತಾರೆ .
ನಿಜಾಮನ ಸೇನೆಯಂತೋ ಅತ್ಯಂತ ನಿಪುಣ ತರಬೇತಿ ಪಡೆದಿದ್ದ ತುರ್ಕರ ಮತ್ತು ಪರ್ಶಿಯನ್
ಕುದುರೆಸವಾರರು ಮತ್ತದರ ಜೊತೆಗೆ ಕೆಲವು ದೇಶದ್ರೋಹಿ ಮರಾಠರಾಗಿದ್ದ ಚಂದ್ರಸೇನ್ ಜಾಧವ್ ಮತ್ತು ರಾಂಬಾಜಿ
ನಿಂಬಾಳ್ಕರ್ ರು ಇದ್ದರು . ಅವರ ಬಳಿ ಭಾರಿ ಸಂಖ್ಯೆಯ ತೋಪುಖಾನೆಗಳಿದ್ದವು .
ಒಮ್ಮೆಲೆ ಧಾಳಿ ಮಾಡುವುದು ಅಪಾಯ ಎಂದು ಅರಿತಿದ್ದ ಬಾಜಿರಾಯ, ಮೊದಲು ನಿಜಾಮನ
ಆರ್ಥಿಕ ಬಲ ಕುಗಿಸುವ ಸಲುವಾಗಿ ಅವನ ಶ್ರೀಮಂತ ಪಟ್ಟಣವಾಗಿದ್ದ ಪುನತಂಬೆ ಎಂಬಲ್ಲಿ 10000 ಬಲದ
ಅಶ್ವದಳದಿಂದ ಮಿಂಚಿನ ಧಾಳಿಮಾಡಿ ಸಂಪತ್ತನ್ನು ಲೂಟಿಗೈದ . ಹಾಗೆಯೇ ಸಿಂಧಕ್ಕೇಡ್ ರಾಜಾ ಮತ್ತು ಜಲ್ನಾ
ಪಟ್ಟಣಗಳನ್ನೂ ಕಬಳಿಸಿದ . ಇದರಿಂದ ಗಲಿಬಿಲಿಗೊಂಡ ನಿಜಾಮ ಬಾಜಿರಾಯನನ್ನು ಹಿಡಿಯಲೆಂದು ವ್ಯರ್ಥ
ಮತ್ತು ಆತುರದ ಪ್ರಯತ್ನ ಮಾಡಲಾರಂಭಿಸಿದ .
ನಿಜಾಮನು ಖಂಡೇಶನಲ್ಲಿ ಬಾಜಿರಾಯನನ್ನು ಅರಸುತ್ತಿದ್ದಾಗ ಬಾಜಿರಾಯ ಹಠಾತ್ತನೆ ವರ್ಹದ್ ಪ್ರಾಂತದಲ್ಲಿ ಕಾಣಿಸಿಕೊಂಡ ಅದರ ಮಾರನೇ ದಿನ ಪೂರ್ಣ ಪರಲಿಯಲ್ಲಿ ನಂತರ
ಕಸ್ಬೆ ನಾರ್ಸಿಕ್ , ಮಂಗುಲ್ಪಿರ್ , ಹಟ್ಗಾವ್ , ಮಂಜ್ರಾಖೇಡ್ , ಮತ್ತು ಚೋಪ್ರಾದ ತಾಪಿಯಲ್ಲಂತೆ
ತನ್ನ ಮಿಂಚಿನ ಚಲನೆಯಿಂದ ನಿಜಾಮನ ಹದಿನಾಲ್ಕು ದಿನಗಳಲ್ಲಿ ನಿಜಾಮನ ಸೇನೆಯನ್ನು
ದಿಕ್ಕಾಪಾಲಾಗಿಸಿದ . ಕೊನೆಯದಾಗಿ ಕುಕರ್ಮುಂಡಾಗೆ ಬಂದ ಬಾಜಿರಾಯ ನಂತರ ಬರ್ಹನ್ ಪುರಕ್ಕೆ ಧಾಳಿ
ಮಾಡುವುದಾಗೆ ಒಂದು ಸುಳ್ಳು ಸುಳಿವು ನೀಡಿದ. ಅದಕ್ಕೆ ಪೂರ್ವ ನಿಯೋಜನೆಯಂತೆ ನಿಜಾಮ ಅಲ್ಲಿನ ರಕ್ಷಣೆಗೆ
ಸಕಲ ಸಿದ್ಧತೆ ನಡೆಸಿದ . ಆದರೆ ಬಾಜಿರಾಯ ಬರಲೇ ಇಲ್ಲ . ಬದಲಾಗಿ ಮತ್ತೆ ತನ್ನ ದಿಕ್ಕನ್ನು
ಬದಲಿಸಿ ಗುಜರಾತಿನತ್ತ ದೌಡಾಯಿಸಿದ್ದ . ಆಗ ಅಲ್ಲಿನ ಮುಘಲರ ರಾಜ್ಯಪಾಲನಾಗಿದ್ದ ಸರಬುಲಂದ ಖಾನ್ ನ
ಆಡಳಿತವಿತ್ತು ಮತ್ತವನು ನಿಜಾಮನ ರಾಜಕೀಯ ವೈರಿಯಾಗಿದ್ದ . ಸರಬುಂದನಿಗೆ ಧಾಳಿಕೋರ ಸೇನೆ ಮರಾಠ
ಮತ್ತು ನಿಜಾಮರ ಮಿತ್ರಪಡೆಯಂತೆ ಕಂಡುಬರುವಂತೆ ಮಾಡಿದ . ಸಮಸ್ತ ಪ್ರಾಂತವನ್ನು ಅಟ್ಟಹಾಸಗೈದ
ಬಾಜಿರಾಯ ಎಷ್ಟು ಸಾಧ್ಯವೋ ಅಷ್ಟು ಲೂಟಿಗೈದು ಕೊನೆಗೆ ಅದರ ಹಣೆಪಟ್ಟಿ ನಿಜಾಮನಿಗೆ ತಟ್ಟುವಂತೆ
ಮಾಡಿದ !
ಇಂಥಹ ಬ್ಲಿಟ್ಜ್ ಕ್ರೀಗ್ ಧಾಳಿಯನ್ನು
ಅಪೇಕ್ಷಿಸದ ಸರಬುಲಂದ ಖಾನ್ ಮತ್ತು ನಿಜಾಮ ತತ್ತರಿಸಿ ಹೋದರು . ಅದರ ಮೇಲೆ ನಿಜಾಮನಿಗೆ ಆದ ಅವಮಾನ
ಮತ್ತು ಪರೋಕ್ಷವಾಗಿ ಗುಜರಾತ್ ಲೂಟಿಮಾಡಿದ ಕೆಟ್ಟ ಹೆಸರು . ಬಾಜಿರಾಯ ಕೈಗೆಟುಕುವುದಿಲ್ಲವೆಂದು
ಮನಗೊಂಡ ನಿಜಾಮ ಅವನನ್ನು ಅಟ್ಟಾಡುವುದನ್ನು ನಿಲ್ಲಿಸಿದ . ಬದಲಾಗಿ ಮರಾಠರ ಮುಖ್ಯಕ್ಷೇತ್ರ ಪುಣೆಯಲ್ಲೇ ಟಿಕಾಣೆ ಹೂಡಿ ಬಾಜಿರಾಯನಿಗೆ ಕಾಯುತ್ತಿದ್ದ
. ಪುಣೆ ಹೋಗುವ ದಾರಿ ಮಧ್ಯ ಶಾಹುವಿನ ಅದೀನ ಉದಾಪುರ, ನಾರಾಯಣ್ ಗಡ , ಖೇದ್ , ಪಬಲ್ ಮತ್ತು
ಅವಸಾರಿಯನ್ನು ವಶಪಡಿಸಿಕೊಂಡಿದ್ದ . ಇದರ ಜೊತೆಗೆ ಕೊಲ್ಲಾಪುರದ ಛತ್ರಪತಿಯನ್ನು ಮರಾಠಾ ಛತ್ರಪತಿಯೆಂದು
ಘೋಷಿಸುವಂಥಹ ರಾಜಕೀಯ ಪಿತೂರಿ ನಡೆಸುತ್ತಾ ಬಾಜಿರಾಯನನ್ನು ಪ್ರಚೋದಿಸಲು ಯೋಜನೆ ನಡೆಸುತ್ತಿದ್ದ .
ಬಾಜಿರಾಯ ಬರುತ್ತಿದ್ದಂತೆ ತನ್ನ ತೋಪುಗಳನ್ನು ಆಯಕಟ್ಟಿನ ಸ್ಥಳಗಳಲ್ಲಿ ಇಟ್ಟು ಅವನ ಸೇನೆಯನ್ನು
ಖಾಲಿ ಮೈದಾನದಲ್ಲಿ ನಾಶ ಮಾಡಲು ಸಿದ್ದತೆ ನಡೆಸಿದ್ದ .
ಆದರೆ ಚತುರನಾಗಿದ್ದ ಬಾಜಿರಾಯ ಪುಣೆಯತ್ತ ತಲೆ
ಹಾಕದೆ ನೇರ ನಿಜಾಮನ ರಾಜಧಾನಿಯಾಗಿದ್ದ ಔರಂಗಾಬಾದಿಗೇ ಲಗ್ಗೆಯಿಟ್ಟ !
ಇದರಿಂದ ತಲೆಕೆಟ್ಟ ನಿಜಾಮ ತನ್ನ ತರಾತುರಿಯಲ್ಲಿ
ಔರಂಗಾಬಾದಿನೆಡೆ ದೌಡಾಯಿಸಿದ . ಅವನ ಭಾರೀ ಸೇನೆ , ತೋಪುಖಾನೆಗಳು , ಅತಿ ಭಾರದ ಕವಚವುಳ್ಳ
ಅಶ್ವದಳವು ಚಲನೆಯನ್ನು ನಿಧಾನಿಸುತ್ತಿತ್ತು . ಅದರ ಜೊತೆ ನಿಜಾಮನ ಜನಾನವೂ ಇತ್ತು ಅಂದರೆ ಹೆಂಗಸರ
ಟೋಳಿ ಮತ್ತು ಯುದ್ಧಕ್ಕೆ ಬೇಕಾಗಿದ್ದ ಸರಬರಾಜುಗಳೂ ಸಹಿತ ಇದ್ದವು . ಚಲನೆಯನ್ನು
ತ್ವರಿತಗೊಳಿಸಲೆಂದು ನಿಜಾಮ ತನ್ನ ತೋಪುಗಳನ್ನು ಮತ್ತು ಭಾರೀ ಘಟಕಗಳನ್ನು ಅಹ್ಮದ್ ನಗರದಲ್ಲೇ
ಬಿಟ್ಟ .
ಆದರೆ ಮರಾಠರ ಸೇನೆ ಲಘುವಾಗಿದ್ದರಿಂದ
ತ್ವರಿತವಾಗಿ ಯಾವ ಲಗಾಮಿಲ್ಲದೆ ಲೂಟಿಗೈದ ಸರಬರಾಜಿನಲ್ಲೇ ಮುನ್ನಡೆದು ಗಂಗಾಪುರ್ , ವಾಜಾಪುರಗಳನ್ನು
ಧಾಳಿಗೈದು ಪಾಲ್ಖೇಡ್ (ಔರಂಗಾಬಾದಿದಿಂದ 28 ಕಿ ಮೀ) ತಲುಪಿದ. ಅಲ್ಲಿ ಬಾಜಿರಾಯ ಹಿಂಬರುತ್ತಿದ್ದ
ನಿಜಾಮನಿಗೆ ಸ್ವಾಗತಕ್ಕೆ ಸಿದ್ಧಮಾಡಲಾರಂಭಿಸಿದ .
ಈಗ ನಿಜಾಮನ ಪ್ರತಿ ಚಲನೆಯೂ ಬಾಜಿರಾಯನಿಗೆ
ಗುಪ್ತಚರರಿಂದ ತಿಳಿಯುತ್ತಿತ್ತು . ನಿಜಾಮನನ್ನು ಸೋಲಿಸಲು ಒಂದು ಸರಳ ಉಪಾಯ , ಕುಡಿಯುವ ನೀರು ದೊರೆಯದಂತೆ
ಆಯಾ ಸ್ಥಳಗಳಲ್ಲಿ ಮೋರ್ಛಾಬಂದಿ .
ಫೆಬ್ರವರಿ 25 1728 ರಂದು ನಿಜಾಮ ಸರಿಯಾಗಿ
ಬಲೆಯ ಮಧ್ಯ ಸಿಕ್ಕಿಬಿದ್ದ ! . ಮರಾಠ ಸೇನಯನ್ನು ದ್ವಂಸಮಾಡುವೆನೆಂದು ಕನಸಿಟ್ಟಿದ್ದ ನಿಜಾಮ ತನ್ನ
ತೋಪುಗಳನ್ನು ದೂರದಲ್ಲೇ ಬಿಟ್ಟಿ ಬಂದಿದ್ದ. ಈಗ ಒಂದು ಕಡೆ ಮರಾಠ ಸೇನೆ ಮತ್ತೊಂದೆಡೆ ಭೀಕರ ಹಸಿವು
ಮತ್ತು ಬಾಯಾರಿಕೆಯಿಂದ ಬಳಲಿದ ತನ್ನ ನಿಃಶಕ್ತ ಸೇನೆ. ಪಾಲ್ಖೇಡ್ ಬಯಲು ನೀರವ ಸ್ಮಶಾನದಂತೆ ಆಭಾಸ
ವಾಗುತ್ತಿತ್ತು . ದಿಕ್ಕು ತೋಚದೇ ನಿಜಾಮ ಸೋಲೊಪ್ಪಿಕೊಂಡ .
ಈ ಪಾಲ್ಖೇಡ್ ಸಮರ ಸೇನಾಪತಿ ಬಾಜಿರಾಯ ಮೊದಲ
ಚೊಚ್ಚಲ ಜಯ . ಹೀಗೆ ಮುಂದೆ ನಲವತ್ತು ಯುದ್ಧಗಳಲ್ಲಿ ಒಂದರಲ್ಲೂ ಸೋಲದೇ ಶತ್ರುಗಳನ್ನು ಸಂಪೂರ್ಣ
ಸೋಲಿಸುವುದರಲ್ಲಿ ನಿಪುಣನಾಗಿದ್ದ ಬಾಜಿರಾಯ (I).
ಈ ಸಮರವು ಕೇವಲ ಭಾರತೀಯ ಇತಿಹಾಸವಲ್ಲದೇ
ಜಾಗತಿಕ ಇತಿಹಾಸದಲ್ಲಿಯೂ ಗುರುತಿಸಿಕೊಂಡಿದೆ . ಬಾಜಿರಾಯನ ರಣ ಚಾತುರ್ಯವನ್ನು ಬ್ರಿಟಿಷ್ ಜನರಲ್
ಮಾಂಟ್ಗೋಮೆರಿ ತನ್ನ “Concise History of Warfare” ನಲ್ಲಿ ಉಲ್ಲೇಖಿಸಿದ್ದಾನಂತೆ . “ The Palkhed campaign of 1727-28 in which Baji Rao I out-generalled
Nizam-ul-Mulk, is a masterpiece of strategic mobility ”
No comments:
Post a Comment